ADVERTISEMENT

ಮಹಿಳೆ– ಮಕ್ಕಳ ಹಕ್ಕುಗಳ ರಕ್ಷಣೆಗೆ ಸಾರ್ವಜನಿಕರು ಕೈ ಜೋಡಿಸಬೇಕು: ಲೋಕಾಯುಕ್ತ ನ್ಯಾ. ಪಿ ವಿಶ್ವನಾಥ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 9:40 IST
Last Updated 18 ನವೆಂಬರ್ 2017, 9:40 IST

ಉಡುಪಿ: ‘ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗೆ ಸರ್ಕಾರದ ಜೊತೆಗೆ ಸಾರ್ವಜನಿಕರು ಕೈ ಜೋಡಿಸಬೇಕು. ಇದು ಪ್ರತಿಯೊಬ್ಬರ ಕರ್ತವ್ಯವೂ ಹೌದು’ ಎಂದು ಲೋಕಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ತಿಳಿಸಿದರು.

ಜಿಲ್ಲಾಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸೇವೆಗಾಗಿ ಸಂಪರ್ಕ ಕಾನೂನು ಮಾಹಿತಿ ಜಾಗೃತಿ ಅಂದೋಲವನದ ಸಮಾರೋಪ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಮಕ್ಕಳ ಹಾಗೂ ಮಹಿಳೆಯರ ನಾಪತ್ತೆ ಪ್ರಕರಣಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಲೋಕಯುಕ್ತ ಸಂಸ್ಥೆಗೆ ಅರ್ಜಿಯೊಂದು ಬಂದಿದ್ದು, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಪ್ರತಿಯೊಂದು ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾಗಿರುವ ಮಕ್ಕಳ ಮತ್ತು ಮಹಿಳೆಯರ ಒಟ್ಟು ಪ್ರಕರಣಗಳು, ಅದರಲ್ಲಿ ಸುಖಾಂತ್ಯ ಕಂಡ ಪ್ರಕರಣ, ಇನ್ನೂ ಪತ್ತೆಯಾಗದೆ ಇರುವ ಪ್ರಕರಣಗಳ ಬಗ್ಗೆ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದರಂತೆ ಪೊಲೀಸ್‌ ಹಾಗೂ ಮಹಿಳಾ ಮತ್ತು ಮಕ್ಕಳ ಎರಡೂ ಇಲಾಖೆ ಜಂಟಿಯಾಗಿ ಸರ್ವೆ ಸಲ್ಲಿಸಿ ವರದಿಯನ್ನು ನೀಡಿದ್ದಾರೆ ಎಂದರು.

ADVERTISEMENT

ಕಾನೂನು ಸೇವಾ ಪ್ರಾಧಿಕಾರ ನೊಂದವರ ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ನ್ಯಾಯ ಒದಗಿಸುವಲ್ಲಿ ಸಹಾಯ ಮಾಡುತ್ತದೆ. ತಪ್ಪತಸ್ಥರಿಗೆ ನೇರವಾಗಿ ಶಿಕ್ಷೆ ನೀಡುವ ಅಧಿಕಾರ ಪ್ರಾಧಿಕಾರಕ್ಕೆ ಇಲ್ಲದಿರಬಹುದು, ಆದರೆ ನ್ಯಾಯಾಲಯದ ಮುಖಾಂತರ ಶಿಕ್ಷೆಗೆ ಗುರಿಪಡಿಸುವ ಅವಕಾಶ ಇದೆ ಎಂದು ಹೇಳಿದರು.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನಾಯ್ಯಾಧೀಶ ವೆಂಕಟೇಶ್ ಟಿ ನಾಯ್ಕ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಎಂ. ಪಾಟಿಲ್‌, ವಕೀಲರ ಸಂಘದ ಅಧ್ಯಕ್ಷ ರತ್ನಾಕರ್‌ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸಂತೋಷ್‌ ಹೆಬ್ಬಾರ್ ಇದ್ದರು. ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಲತಾ ಸ್ವಾಗತಿಸಿದರು.

ನ್ಯಾಯಾಲಯಗಳ ಸಂಖ್ಯೆ ಕಡಿಮೆ: ಇತರ ದೇಶಕ್ಕೆ ಹೋಲಿಕೆ ಮಾಡಿದಾಗ ದೇಶದ ಜನಸಂಖ್ಯೆ ಆಧಾರದ ಮೇಲೆ ಭಾರತದಲ್ಲಿ ಇರುವ ನ್ಯಾಯಾಲಯಗಳ ಸಂಖ್ಯೆ ಬಹಳಷ್ಟು ಕಡಿಮೆ. ಇದರಿಂದಾಗಿ ನ್ಯಾಯಾಲಯದಲ್ಲಿ ವ್ಯಾಜ್ಯಗಳು ಇತ್ಯರ್ಥವಾಗಲ ಬಹಳಷ್ಟು ಸಮಯ ಬೇಕಾಗುತ್ತಿದೆ. ಅದಕ್ಕೆ ಪರ್ಯಾಯ ಮಾರ್ಗವಾಗಿ ನ್ಯಾಯಾಲಯದ ಪ್ರಕರಣಗಳನ್ನು ಲೋಕ್‌ ಆದಾಲತ್‌ನಲ್ಲಿ ಸಂಧಾನದ ಮೂಲಕ ಇತ್ಯರ್ಥ ಮಾಡುತ್ತಿರುವುದು ಅತ್ಯಂತ ಪರಿಣಾಮಕಾರಿಯಾಗಿದೆ.
ನ್ಯಾ. ಪಿ.ಶ್ವನಾಥ್ ಶೆಟ್ಟಿ, ಲೋಕಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.