ಕಾರ್ಕಳ: ಪುರಸಭೆಯ ನೌಕರರು ಹಾಗೂ ಪೌರಕಾರ್ಮಿಕರು ಜೆಸಿಟಿಯು ಅಖಿಲ ಭಾರತ ಮುಷ್ಕರ ಬೆಂಬಲಿಸಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಬುಧವಾರ ಪುರಸಭೆಯ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.
ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ರದ್ದುಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕಾರ್ಮಿಕ ಕಾನೂನನ್ನು ತಿರುಚಬಾರದು. ಪುರಸಭೆಯ ದಿನಗೂಲಿ ನೌಕರರ ವೇತನವನ್ನು ಹೆಚ್ಚಿಸಬೇಕು ಮತ್ತು ಸರ್ಕಾರದ ಆದೇಶದಂತೆ ಕಾಯಂ ಗೊಳಿಸಿ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿಯಲ್ಲಿ ವಿನಂತಿಸಿಕೊಂಡಿದ್ದಾರೆ. ನಂತರ ಮನವಿಯನ್ನು ಮುಖ್ಯಾಧಿಕಾರಿ ಅವರಿಗೆ ನೀಡಲಾಯಿತು.
ಸುಜಿತ್, ಸಂತೋಷ್, ಹರೀಶ್, ಸುದರ್ಶನ್, ರಾಜೇಶ್, ರವೀಂದ್ರ, ಅನಿಲ್ ಕುಮಾರ್, ಗಣೇಶ್, ಉಮೇಶ್, ಸಂಜೀವ, ಪುನೀತ್, ಶಶೀತ್, ಜಯಕರ, ರವಿ ಸದಸ್ಯ ಮೊಹಮದ್ ಶರಿಫ್ ಹಾಗೂ ಕಾರ್ಮಿಕ ಸಂಘ, ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.
ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ
ದೇಶದ ವಿವಿಧ ಕಾರ್ಮಿಕ ಸಂಘಟನೆಗಳು ಹಲವು ಬೇಡಿಕೆಗಳನ್ನು ಮುಂದಿಟ್ಟು ಬುಧವಾರ ಕರೆ ನೀಡಿದ ಮುಷ್ಕರಕ್ಕೆ ನಗರದಲ್ಲಿ ಮುಷ್ಕರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಸ್ನಿಲ್ದಾಣದಲ್ಲಿ ಯಾವುದೇ ಬಸ್ಗಳು ಓಡಾಡದೇ ಬಸ್ನಿಲ್ದಾಣ ಬಿಕೋ ಎನ್ನುತ್ತಿದ್ದ ದೃಶ್ಯ ಎದ್ದು ಕಾಣುತ್ತಿತ್ತು. ಮುಷ್ಕರ ವಿಷಯ ತಿಳಿದಿದ್ದ ಶಿಕ್ಷಣ ಸಂಸ್ಥೆಗಳು ರಜೆಯನ್ನು ಘೋಷಿಸಿದ್ದವು.
ವಿದ್ಯಾರ್ಥಿಗಳಿಗೆ ನಡೆಯಬೇಕಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಯಿತು. ಸರ್ಕಾರಿ ಕಚೇರಿ, ರಾಷ್ಟ್ರೀಕೃತ ಬ್ಯಾಂಕ್ಗಳು ತೆರೆದಿದ್ದರೂ ವ್ಯವಹಾರ ನಡೆಯಲಿಲ್ಲ. ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ರಿಕ್ಷಾ ಹಾಗೂ ಟ್ಯಾಕ್ಸಿಗಳ ಓಡಾಟ ಬಿಟ್ಟರೆ ಕೆಲವೇ ಖಾಸಗಿ ವಾಹನಗಳು ಸಂಚರಿಸಿದವು. ಜನರ ಓಡಾಟ ತೀರಾ ಕಡಿಮೆಯಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.