ಉಡುಪಿ: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆ ಆಯೋಜಿಸಿರುವ ‘ಉಡುಪಿ ಪರ್ಬ’ ಹಾಗೂ ‘ಸಾಹಸ ಉತ್ಸವ’ ಇಂದಿನಿಂದ ಆರಂಭವಾಗಲಿದೆ.
ಮಲ್ಪೆ ಕಡಲ ಕಿನಾರೆಯಲ್ಲಿ ಇಂದು ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಉಪಸ್ಥಿತರಿರುವರು.
ಉದ್ಘಾಟನಾ ಕಾರ್ಯಕ್ರಮದ ನಂತರ ನಾಟ್ಯರೂಪ ನೃತ್ಯ ತಂಡದವರು ನೃತ್ಯ ಪ್ರದರ್ಶನ ನೀಡುವರು. ರಾತ್ರಿ 8 ಗಂಟೆಗೆ ಖ್ಯಾತ ಡ್ರಮ್ಸ್ ವಾದಕ ಶಿವಮಣಿ ಅವರಿಂದ ವಾದ್ಯಗಳ ಸಂಗೀತ ಕಾರ್ಯಕ್ರಮ ಇದೆ. ಬೆಳಿಗ್ಗೆ 9ರಿಂದಲೇ ಮರಳು ಶಿಲ್ಪ ರಚನೆ ಸ್ಪರ್ಧೆ ಹಾಗೂ ಚಿತ್ರಕಲೆ– ಕಲಾ ಶಿಬಿರ ಆರಂಭವಾಲಿಗಲಿದೆ. ಸೇಂಟ್ ಮೇರಿಸ್ ದ್ವೀಪದ ಛಾಯಾಚಿತ್ರ ತೆಗೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕರಾವಳಿ ವೈವಿಧ್ಯ ಖಾದ್ಯಗಳ ಆಹಾರ ಮೇಳ 29ರಿಂದ 31ರ ವರೆಗೆ ನಡೆಯಲಿದೆ.
30ರಂದು ಸಂಜೆ 6 ಗಂಟೆಗೆ ಪ್ರಹ್ಲಾದ್ ಆಚಾರ್ಯ ಅವರಂದ ಶಾಡೋ ಪ್ಲೇ ಕಾರ್ಯಕ್ರಮ, 7ರೀಂದ ಕರ್ನಾಟಕ ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ. 31ರಂದು ಸಂಜೆ 7ರಿಂದ ಸಂಗೀತ ಸಂಜೆ ಕಾರ್ಯಕ್ರಮ ಅದೇ ಮಲ್ಪೆಯ ವೇದಿಕೆಯಲ್ಲಿ ನಡೆಯಲಿದೆ. ಅಜ್ಜರಕಾಡು ಬಯಲು ರಂಗಮಂದರದಲಲಿ 31ರಂದು ಬೆಳಿಗ್ಗೆ 9 ಗಂಟೆಯಿಂದ ಶ್ವಾನ ಪ್ರದರ್ಶನ ಏರ್ಪಡಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.