ADVERTISEMENT

ವಾಹನಗಳಿಗೆ ಸಂಘ– ಸಂಸ್ಥೆ, ಪಕ್ಷದ ಹುದ್ದೆ ನಾಮ ಫಲಕ ಅಳವಡಿಸುವವರ ವಿರುದ್ಧ ಕ್ರಮ: ಡಾ. ಸಂಜೀವ್‌ ಎಂ.ಪಾಟೀಲ್‌

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 4:53 IST
Last Updated 1 ಡಿಸೆಂಬರ್ 2017, 4:53 IST

ಉಡುಪಿ: ಯಾವುದೇ ಕಾರಣಕ್ಕೂ ವಾಹನದ ಮೇಲೆ ಸಂಘ– ಸಂಸ್ಥೆ ಹಾಗೂ ಹುದ್ದೆಯ ಹೆಸರು ಇರುವ ಫಲಕ ಅಳವಡಿಸುವಂತಿಲ್ಲ. ಇದರ ವಿರುದ್ಧ ಮುಂದಿನ ವಾರದಿಂದ ಪ್ರಕರಣ ದಾಖಲಿಸುವ ಅಭಿಯಾನ ಆರಂಭಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಎಂ ಪಾಟೀಲ್ ಎಚ್ಚರಿಕೆ ನೀಡಿದರು.

ಗುರುವಾರ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋಟಾರು ವಾಹನ ಕಾಯ್ದೆ ಅನ್ವಯ ಯಾವುದೇ ಪಕ್ಷ ಹಾಗೂ ಸಂಘದ ವ್ಯಕ್ತಿಗಳು ತಮ್ಮ ಹುದ್ದೆಯ ವಿವರ ಇರುವ ಫಲಕ ವಾಹನದಲ್ಲಿ ಹಾಕುವಂತಿಲ್ಲ. ಆದರೆ ಉಡುಪಿ ಜಿಲ್ಲೆಯಲ್ಲಿ ನಾಮ ಫಲಕವನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಅನೇಕ ದೂರ ಬಂದಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಾಗುತ್ತದೆ ಎಂದರು.

ಬೆಳಗಿನ ಜಾವ ವಾಯುವಿಹಾರಕ್ಕೆ ತೆರಳುವ ಮಹಿಳೆಯರು ಒಂಟಿಯಾಗಿ ಹೋಗದೆ ಪರಿಚಿತರ ಹಾಗೂ ಮನೆಯವರೊಂದಿಗೆ ಹೋದರೆ ಒಳಿತು. ಧರಿಸುವ ಬಂಗಾರ ಸರ ಹಾಗೂ ಇತರ ಅಮೂಲ್ಯ ವಸ್ತುಗಳ ಕಡೆ ಗಮನ ಇರಬೇಕು. ಅಪರಿಚಿತರು ಸ್ಥಳದ ಮಾಹಿತಿ ಕೇಳುವ ನೆಪದಲ್ಲಿ ಒಡೆವೆಯನ್ನು ದೋಚುತ್ತಿದ್ದಾರೆ. ಕಾರ್ಕಳ ಠಾಣೆಯಲ್ಲಿ ಇಂತಹ ಕೆಲವು ಪ್ರಕರಣ ಈಗಾಗಲೇ ದಾಖಲಾಗಿದೆ ಎಂದು ಹೇಳಿದರು.

ADVERTISEMENT

ಅಪರಿಚಿತ ವ್ಯಕ್ತಿಗಳು ಸಂಶಯಾಸ್ಪದವಾಗಿ ತಿರುಗುವುದು ಕಂಡು ಬಂದರೆ ಕೊಡಲೇ ಸಮೀಪದ ಪೊಲೀಸ್‌ ಠಾಣೆಗೆ ತಿಳಿಸಿ ಎಂದು ಅವರರ ಮನವಿ ಮಾಡಿದ್ದಾರೆ. ಒಂದೇ ಮಾದರಿಯ ವಾಹನಕ್ಕೆ ಸುರತ್ಕಲ್ ಟೋಲ್‌ಗೇಟ್‌ನಲ್ಲಿ ₹40, ಪಡುಬಿದ್ರಿಯಲ್ಲಿ ₹50 ಹಾಗೂ ಸಾಸ್ತನದಲ್ಲಿ ₹60 ಟೋಲ್‌ ಶುಲ್ಕ ವಿಧಿಸಲಾಗುತ್ತದೆ. ಒಂದು ಟೋಲ್‌ನಿಂದ ಇನ್ನೊಂದು ಟೋಲ್‌ಗೆ ಒಂದೇ ವಾಹನಕ್ಕೆ ಶುಲ್ಕದಲ್ಲಿ ಆಗುತ್ತಿರುವ ವ್ಯತ್ಯಾಸ ಆಗುತ್ತಿದೆ ಎಂದರು. ಜಿಲ್ಲಾಧಿಕಾರಿಗೆ ಈ ಮಾಹಿತಿ ನೀಡಲಾಗುವುದು ಎಂದು ಎಸ್ಪಿ ಹೇಳಿದರು.

ರಟ್ಟಾಡಿ ಬಳಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಹಣ ಸಂಗ್ರಹಿಸುತ್ತಿರುವ ಮಹಿಳೆಯ ಮೇಲೆ ಹಲ್ಲೆ ನಡೆಸಿ ಹಣ ದೋಚಿರುವ ಪ್ರಕರಣದ ತನಿಖೆಯ ಬಗ್ಗೆ ಹಳ್ಳಿಹೊಳೆಯ ನಿವಾಸಿ ಮಾಹಿತಿ ಕೇಳಿದರು. ಮಲ್ಪೆ ಕಡಲ ಕಿನಾರೆಯಲ್ಲಿ ಕೆಲವರು ಅಸಭ್ಯ ರೀತಿಯಲ್ಲಿ ವರ್ತಿಸುತ್ತಿರುವ ಬಗ್ಗೆ ಅಲ್ಲಿನ ನಿವಾಸಿ ಮಾಹಿತಿ ನೀಡಿದರು. ಗಸ್ತು ವ್ಯವಸ್ಥೆ ಹೆಚ್ಚಿಸುವ ಭರವಸೆಯನ್ನು ಎಸ್ಪಿ ನೀಡಿದರು.

ಪರ್ಕಳದಲ್ಲಿ ಗಾಂಜಾ ಹಾಗೂ ಡ್ರಾಗ್ಸ್‌ ಸೇವನೆ ಹಾಗೂ ಮಾರಾಟ, ಮಲ್ಪೆ ಪಡುಕರೆ ಸೇತುವೆಯಲ್ಲಿ ಅಕ್ರಮ ಪಾರ್ಕಿಂಗ್‌, ಮಣಿಪಾಲ ವಿವಿಧೆಡೆಯಲ್ಲಿ ಇಸ್ಪೀಟ್‌ ಜೂಜಾಟ, ಕರಾವಳಿ ಅಂಡರ್‌ ಪಾಸ್‌ನಲ್ಲಿ ವಾಹನ ಸಂಚರಿಸಲು ಅನುವು, ಇಂದ್ರಾಳಿ ಅವೈಜ್ಞಾನಿಕ ರಸ್ತೆ ಉಬ್ಬು ಸೇರಿದಂತೆ ಒಟ್ಟು 25 ಕರೆಗಳು ಬಂದವು.

ಎಸ್ಪಿಗೆ ಮೆಚ್ಚುಗೆ, ಸನ್ಮಾನದ ಆಮಿಷ!
ಮಣಿಪಾಲದ ವ್ಯಕ್ತಿಯೊಬ್ಬರು ಕರೆ ಮಾಡಿ ಎಸ್ಪಿ ಡಾ. ಸಂಜೀವ.ಎಂ ಪಾಟೀಲ್‌ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಜಿಲ್ಲಾಧಿಕಾರಿ ಕಚೇರಿ ಮತ್ತು ಮಣಿಪಾಲ ಅಂಚೆ ಕಚೇರಿ ರಸ್ತೆಯಲ್ಲಿ ಖಾಸಗಿ ವಾಹನಗಳು ರಸ್ತೆಯಲ್ಲಿಯೇ ಪಾರ್ಕಿಂಗ್‌ ಮಾಡುತ್ತಿರುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಸಮಸ್ಯೆ ಬಗೆಹರಿಸಿದರೆ ಸಾರ್ವಜನಿಕ ಸನ್ಮಾನ ಮಾಡಲಾಗುತ್ತದೆ ಎಂದರು.

* * 

ಪರ್ತಕರ್ತರಲ್ಲದವರು ವಾಹನದ ಮೇಲೆ ಪ್ರೆಸ್ ಎಂದು ಬರೆದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ಪೊಲೀಸ್‌ ಇಲಾಖೆಯಿಂದ ಹೊಸ ಸ್ಟೀಕರ್‌್ ನೀಡಲಾಗುತ್ತದೆ
ಡಾ. ಸಂಜೀವ್‌ ಎಂ. ಪಾಟೀಲ್‌,
ಎಸ್ಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.