ADVERTISEMENT

‘ಅಪಪ್ರಚಾರಕ್ಕೆ ಕಿವಿಕೊಡದೆ ಕಾಂಗ್ರೆಸ್‌ ಬೆಂಬಲಿಸಿ’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2014, 9:38 IST
Last Updated 15 ಏಪ್ರಿಲ್ 2014, 9:38 IST

ಉಪ್ಪುಂದ (ಬೈಂದೂರು): ‘ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗುವುದಕ್ಕೆ ತಡೆಯೊಡ್ಡಿ, ದ್ರೋಹ ಬಗೆದ ಎಚ್‌.ಡಿ.ದೇವೇ ಗೌಡ ಈಗ ಅವರ ಮಗಳನ್ನು ತಮ್ಮ ಪಕ್ಷದ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಸಿ ಬಂಗಾರಪ್ಪ ಅವರ ಹೆಸರಿನಲ್ಲಿ ಮತ ಯಾಚಿಸು­ತ್ತಿದ್ದಾರೆ.

ಬಂಗಾರಪ್ಪ ಸಚಿವ, ಮುಖ್ಯಮಂತ್ರಿ ಮತ್ತು ಸಂಸದರಾದುದು ಕಾಂಗ್ರೆಸ್‌ ಪಕ್ಷದ ಮೂಲಕ ಎನ್ನುವುದನ್ನು ಶಿವಮೊಗ್ಗ ಮತ್ತು ಬೈಂದೂರಿನ ಜನರು ಅರಿತಿದ್ದಾರೆ. ಅವರು ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸುವ ಮೂಲಕ ಈ ಸಮಯಸಾಧಕತನಕ್ಕೆ ಸೂಕ್ತ ಉತ್ತರ ನೀಡುತ್ತಾರೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ವಿ. ಮಂಜುನಾಥ ಭಂಡಾರಿ ಹೇಳಿದರು. 

ಉಪ್ಪುಂದದಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತ­ನಾಡಿದರು. ‘ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪ ತಮ್ಮ ಪಕ್ಷಕ್ಕಾಗಲೀ, ತಮಗಾಗಲೀ ಮತ ಕೇಳುತ್ತಿಲ್ಲ. ಬದಲಾಗಿ ಇಲ್ಲಿನ ಜನ ಮತ ನೀಡಲಾಗದ ನರೇಂದ್ರ ಮೋದಿಗೆ ಮತ ಯಾಚಿಸುತ್ತ ಮತದಾರರನ್ನು  ಮೂರ್ಖರನ್ನಾಗಿಸುತ್ತಿದ್ದಾರೆ’ ಎಂದು ಅವರು ದೂರಿದರು. 

ಕಾಂಗ್ರೆಸ್‌ ಕೃಷಿ, ಕೈಗಾರಿಕೆ, ತಂತ್ರಜ್ಞಾನ, ಸಾರಿಗೆ, ಸಂಪರ್ಕ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ದೇಶವನ್ನು ಸ್ವಯಂಪೂರ್ಣತೆಯತ್ತ ಒಯ್ದ ಹೆಗ್ಗಳಿಕೆಗೆ ಪಾತ್ರವಾಗಿದೆ.  ಜನರ ಸಾಮಾಜಿಕ, ಆರ್ಥಿಕ ಪ್ರಗತಿಗಾಗಿ ಹತ್ತಾರು ಮಹತ್ವದ ಯೋಜನೆಗಳನ್ನು ಅನುಷ್ಠಾನ ಮಾಡಿದೆ. ಭ್ರಷ್ಟಾಚಾರ ದೂರ ಮಾಡಲು ಜನರ ಕೈಗೆ ಮಾಹಿತಿ ಹಕ್ಕು, ಲೋಕಪಾಲ ಕಾಯಿದೆ ರೂಪಿಸಿದೆ. ಮರಳಿ ಮುಂದಿನ ಐದು ವರ್ಷದ ಅಧಿಕಾರ ಗಳಿಸಿದರೆ ದೇಶವನ್ನು ಜಾಗತಿಕ ಶಕ್ತಿಯಾಗಿ ಮಾರ್ಪಡಿಸಲಿದೆ. ಆದುದರಿಂದ ಜನರು ವಿರೋಧಿಗಳ ಅಪಪ್ರಚಾರಕ್ಕೆ ಕಿವಿಗೊಡದೆ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕು ಎಂದು ವಿನಂತಿಸಿದರು.

ಶಾಸಕ ಕೆ. ಗೋಪಾಲ ಪೂಜಾರಿ, ಜಿಲ್ಲಾ ಕಾಂಗ್ರೆಸ್‌ ಪದಾಧಿಕಾರಿಗಳಾದ ಎಸ್‌. ಪ್ರಕಾಶ್ಚಂದ್ರ ಶೆಟ್ಟಿ,  ಎಸ್. ಮದನಕುಮಾರ ಮಾತನಾಡಿದರು. ಮಂಜುನಾಥ ಖಾರ್ವಿ ನಿರೂಪಿಸಿದರು. ವೀಕ್ಷಕ ಜಿತೇಂದ್ರ ಪ್ರಭು, ಪಕ್ಷ ಪ್ರಮುಖರಾದ ಕೆ. ರಮೇಶ ಗಾಣಿಗ, ಎಸ್. ರಾಜು ಪೂಜಾರಿ, ರಿಯಾಜ್ ಅಹಮದ್, ರಘುರಾಮ ಶೆಟ್ಟಿ, ಜೋಸ್, ಸತೀಶ ಶೆಟ್ಟಿ, ಶಾರದಾ ಡಿ. ಬಿಜೂರು, ಸುಬ್ರಹ್ಮಣ್ಯ ಪೂಜಾರಿ, ವಾಸುದೇವ ಯಡಿಯಾಳ, ರಾಜು ದೇವಾಡಿಗ, ವಿಜಯಕುಮಾರ ಶೆಟ್ಟಿ, ವಾಸುದೇವ ಪೂಜಾರಿ, ಇತರರು ಇದ್ದರು. ಬೈಂದೂರಿನಲ್ಲಿ ನಡೆದ ಸಭೆಯಲ್ಲೂ ಭಂಡಾರಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.