ADVERTISEMENT

‘ಯುದ್ಧ ಮಾಡದೆ ಗೆದ್ದು ಬರುವ ವ್ಯಕ್ತಿ ಗಾಂಧಿ’

ಮಣಿಪಾಲ ವಿ.ವಿ.ಯಲ್ಲಿ ಗಾಂಧಿ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2015, 5:28 IST
Last Updated 3 ಅಕ್ಟೋಬರ್ 2015, 5:28 IST

ಹಿರಿಯಡಕ: ‘ಯುದ್ಧ ಮಾಡದೇ ಗೆದ್ದು ಬರುವಂತಹ ದೊಡ್ಡ ಚೇತನ ಗಾಂಧೀಜಿ. ಅವರು ಯಾರೊಡೆನೆಯೂ ಕೋಪ ಮಾಡಿಕೊಳ್ಳದೆ ಶಾಂತಿಯುತ ವಾಗಿ ವಿಷಯವನ್ನು ಜನರಿಗೆ ಮನದಟ್ಟು ಮಾಡಿಕೊಡುವುದರಲ್ಲಿ ಪರಿಣಿತಿ ಹೊಂದಿದ್ದರು. ಆದರೆ ಇಂದು ನಮ್ಮ ದೇಶ ಗಾಂಧೀಜಿಯನ್ನು ಮರೆತು ನಿದ್ದೆಯಲ್ಲಿದೆ.

ಇಂತಹ ಮಹಾನ್ ವ್ಯಕ್ತಿ ಮತ್ತೆ ನಮ್ಮ ದೇಶದಲ್ಲಿ ಹುಟ್ಟಿ ಬರಬೇಕು’ ಎಂದು ಖ್ಯಾತ ಲೇಖಕಿ ವೈದೇಹಿ ಹೇಳಿದರು. ಅವರು ಶುಕ್ರವಾರ ಮಣಿಪಾಲ ವಿಶ್ವ ವಿದ್ಯಾಲಯದ ಸೆಂಟರ್ ಫಾರ್ ಗಾಂಧಿ ಆಂಡ್ ಪೀಸ್ ಸ್ಟಡೀಸ್‌ನ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಅಪ್ಪಟ ಬಂಗಾರದಂತಿದ್ದ ಗಾಂಧೀಜಿ ಅವರು ದೈಹಿಕ ಸಂಯಮ ವನ್ನು ಸಾಧಿಸಲು ತುಂಬಾ ಕಷ್ಟಪಟ್ಟಿದ್ದರು. ಕೇವಲ ಭಾರತ ಸ್ವಾತಂತ್ರ್ಯ ಪಡೆದರೆ ಸಾಲದು, ದೇಶದ ಪ್ರತಿಯೊಂದು ಗ್ರಾಮಕ್ಕೆ ಸ್ವಾತಂತ್ರ್ಯ ದೊರೆತರೆ ಖುಷಿ ಪಡುವಂತಹ ಪರಿಕಲ್ಪನೆ ಅವರದಾಗಿತ್ತು. ಗಾಂಧೀಜಿ ಯವರು ಯಾವ ಧರ್ಮದ ಗ್ರಂಥವನ್ನು ಕೂಡಾ ಆಳವಾಗಿ ಓದಿದವರಲ್ಲ.

ಕೇವಲ ಕಥೆಗಳನ್ನು ಕೇಳುವುದರ ಮೂಲಕ ಆ ಧರ್ಮ ಗ್ರಂಥದ ಬಗ್ಗೆ ತಿಳಿದು ಕೊಂಡಿದ್ದರು. ಲಾಲ್ ಬಹದ್ದೂರ್ ಶಾಸ್ತ್ರೀ ಕೂಡಾ ಗಾಂಧೀಜಿಯವರ ತತ್ವಗಳನ್ನು ಆಧರಿಸಿ ದೇಶವನ್ನು ಆಳಲು ಬಯಸಿದ್ದರು. ಈ ಎರಡೂ ಮಹಾನ್ ಚೇತನಗಳು ಮತ್ತೆ ನಮ್ಮ ದೇಶದಲ್ಲಿ ಹುಟ್ಟಿ ಬರಬೇಕು’ ಎಂದರು. ವರದೇಶ್ ಹಿರೇಗಂಗೆ ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು. ಜೋತ್ಸ್ನಾ  ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.