ಉಡುಪಿ: ಈದು ಉಲ್ ಪಿತರ್ ಮುಸ್ಲಿಮರ ಸಂತೋಷವನ್ನು ಹಮ್ಮಿಕೊಳ್ಳುವ ಹಾಗೂ ಇತರರಿಗೆ ಶಾಂತಿ ಸೌಹಾರ್ದತೆಯ ಸಂದೇಶ ನೀಡುವ ಒಂದು ಹಬ್ಬವಾಗಿದೆ.ಮುಸ್ಲಿಮರು ಈ ಹಬ್ಬದ ಸಂದರ್ಭದಲ್ಲಿ ಪ್ರತಿಯೊಬ್ಬರ ಸುಖ-ದುಃಖಗಳಲ್ಲಿ ಬಾಗಿಯಾಗಿ ಅಲ್ಲಾಹನಲ್ಲಿ ಪ್ರಾರ್ಥನೆಯನ್ನು ಸಾಮೂಹಿಕ ನಿರ್ವಹಿಸುತ್ತಾರೆ.
ಈ ಹಬ್ಬವು ಮಾನವ ಜೀವನದ ಸಮತೋಲನ ಕಾಯ್ದಿರಿಸಿ ಶಾಂತಿಯನ್ನು ಸಾರುವುದರ ಮುಖಾಂತರ ಮನುಷ್ಯ ಸಮುದಾಯದ ಅಗತ್ಯವನ್ನು ಪೂರ್ಣಗೊಳಿಸುತ್ತದೆ. ಈ ಮೂಲಕ ಇಡೀ ವಿಶ್ವಕ್ಕೆ ಶಾಂತಿ ಸಂಸ್ಥಾಪನೆಯ ಕರೆ ನೀಡುತ್ತದೆ ಎಂದು ಉಡುಪಿ ಜಾಮೀಯ ಮಸೀದಿಯ ಇಮಾಮರಾದ ಮೌಲಾನಾ ಅಬ್ದುರ್ರಶೀದ್ ನದ್ವಿ ಹೇಳಿದ್ದಾರೆ.
ಪ್ರವಾದಿಗಳು ಹೇಳಿದಂತೆ ಇಡೀ ಮನುಷ್ಯಸಮುದಾಯ ಒಂದು ಕುಟುಂಬವಾಗಿದೆ. ಒಬ್ಬನು ಇನ್ನೊಬ್ಬನಿಗೆ ಉಪಕಾರ ಮಾಡುವವ ಅತ್ಯುತ್ತಮ ಮನುಷ್ಯ. ಅದೇ ರೀತಿ ಮೊಹಮ್ಮದ್ ಪ್ರವಾದಿ, ಮನುಷ್ಯರೊಂದಿಗೆ ಪ್ರೀತಿ, ಸೌಹಾರ್ದತೆ, ಕರುಣೆದೊಂದಿಗೆ ಜೀವನ ನಡೆಸಲು ಮಾರ್ಗದರ್ಶನ ನೀಡಿದ್ದಾರೆ. ಇಸ್ಲಾಂ ಮಾನವ ಜೀವನದ ಪ್ರತಿಯೊಂದು ರಂಗದಲ್ಲೂ ಶಾಂತಿ, ಸುಭೀಕ್ಷೆ ಸ್ಥಾಪನೆಗೆ ನೇರ ಪ್ರೇರಣೆ ನೀಡುತ್ತದೆ. ಈ ಹಬ್ಬವು ಎಲ್ಲಾ ಮನುಷ್ಯರ ಮಧ್ಯೆ, ಪ್ರತಿಯೊಂದು ಮನೆಯಲ್ಲಿ ಪ್ರೀತಿ, ಸೌಹಾರ್ದ, ಶಾಂತಿ ಹರಡಲಿ. ಪ್ರಸ್ತುತ ಜಗತ್ತಿಗೆ ಇದರ ಅಗತ್ಯ ಇದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.