ADVERTISEMENT

ಇಲ್ಲಿ ಪರಿಸರ ಕತೆ ಕೇಳುವುದು ಕಡ್ಡಾಯ!

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2014, 7:03 IST
Last Updated 4 ಸೆಪ್ಟೆಂಬರ್ 2014, 7:03 IST

ಶಿರಸಿ: ನೆಲಮೂಲದ ದೇಸಿ ಜ್ಞಾನ ವಿನಿಮಯದ ಕನಸು ಹೊತ್ತು ತಾಲ್ಲೂಕಿನ ಕಳವೆಯಲ್ಲಿ ನಿರ್ಮಾಣಗೊಂಡಿರುವ ‘ಕಾನ್ಮನೆ’ ಈಗ ಪೂರ್ಣ ಪ್ರಮಾಣದಲ್ಲಿ ಅಣಿಯಾಗಿದೆ. ಇದೇ ಸಭಾಂಗಣದಲ್ಲಿ ಮಂಗಳವಾರ ಅರಣ್ಯ ಇಲಾಖೆಯ ತರಬೇತಿ ಕಾರ್ಯಕ್ರಮ ಸಹ ನಡೆಯಿತು.

ಮೂಲಿಕಾ ಶಿಬಿರ, ನೆಲ–ಜಲ ಸಂರಕ್ಷಣೆ ದೇಸಿ ಜ್ಞಾನ ಹಂಚಿಕೆ, ಕೃಷಿ–ಪರಿಸರ ಮಾಧ್ಯಮ ತರಬೇತಿ, ಪರಿಸರ ಸಾಹಿತ್ಯ ಚಿಂತನೆ, ಪರಿಸರ ಚಲನಚಿತ್ರೋತ್ಸವ, ಗ್ರಾಮೀಣ ಅಭಿವೃದ್ಧಿ ಮಾದರಿ ಪರಿಚಯ, ಮಕ್ಕಳಿಗೆ ಪರಿಸರ ಶಿಕ್ಷಣ ಮೊದಲಾದ ಕಾರ್ಯಕ್ರಮಗಳಿಗೆ ಮೀಸಲಿಟ್ಟು ಕಾನ್ಮನೆ ತಲೆಎತ್ತಿದೆ.

150 ಜನ ಕೂಡ್ರಬಹುದಾದ ಸಭಾಂಗಣ, ಅತಿಥಿ ಕೊಠಡಿಗಳು, ಊಟದ ಮನೆ, ಹಾಯಾಗಿ ಕುಳಿತು ಸುದ್ದಿ ಕತೆ ಹೇಳಲು ಮಾಡಿಸಿದಂತಿರುವ ಪೌಳಿಮನೆ ಎಲ್ಲವೂ ಶೃಂಗಾರಗೊಂಡಿವೆ. ಎಲ್ಲ ವ್ಯವಸ್ಥೆ ಇರುವ ಇಲ್ಲಿ 40 ಜನ ವಾಸ್ತವ್ಯ ಮಾಡಬಹುದು. ಇಡೀ ಕಟ್ಟಡಕ್ಕೆ ಈಗಾಗಲೇ ₨ 40 ಲಕ್ಷ ವೆಚ್ಚ ತಗಲಿದೆ. ಇನ್ನೂ ಅನೇಕ ಕೆಲಸಗಳು ಆಗಬೇಕಾಗಿವೆ. ಹೀಗಾಗಿ ಸಭೆ, ತರಬೇತಿ ಮುಂತಾದ ಕಾರ್ಯಕ್ರಮ ನಡೆಸಲು ಇಲ್ಲಿ ಅವಕಾಶ ಒದಗಿಸಲಾಗಿದೆ ಎಂದು ಕಾನ್ಮನೆಯ ಮೂಲ ರೂವಾರಿ ಶಿವಾನಂದ ಕಳವೆ ತಿಳಿಸಿದ್ದಾರೆ.

ಪರಿಸರ ಕತೆ ಕೇಳುವುದು ಕಡ್ಡಾಯ: ಆದರೆ ಯಾವುದೇ ಕಾರ್ಯಕ್ರಮವಿದ್ದರೂ ಇಲ್ಲಿ 15 ನಿಮಿಷ ಪರಿಸರದ ಕತೆ ಕೇಳುವುದು, ಚಿತ್ರ ನೋಡುವುದು ಕಡ್ಡಾಯವಾಗಿದೆ. ಇಲ್ಲಿನ ಪರಿಸರ ಪಾಠಗಳಿಗೆ ಅಗತ್ಯ ಪಠ್ಯ ರಚನೆಯಾಗಲಿದೆ. ಅದು ಪರಿಸರ ವಿಜ್ಞಾನದ ಜೊತೆಗೆ ದೇಸಿ ಜ್ಞಾನಕ್ಕೆ ಒತ್ತು ನೀಡಲಿದೆ.

ಮನೆ ಕಟ್ಟಿ ಮುಗಿದಿದೆ. ಇನ್ನು ನಾಡಿನ ಜನರಲ್ಲಿ ವನ ಕಟ್ಟಲು ಮನ ಬೆಳೆಸುವ ಕಾರ್ಯ ಮಾಡಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.