ಉಪ್ಪುಂದ (ಬೈಂದೂರು): ಇಲ್ಲಿನ ಶಾಲೆ ಬಾಗಿಲು ಎಂಬಲ್ಲಿ ಬೈಕ್ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಇದೇ 28ರಂದು ಹಸೆಮಣೆ ಯೇರಬೇಕಿದ್ದ ಯುವಕ ಮೃತಪಟ್ಟಿದ್ದಾರೆ.ಭಟ್ಕಳದ ಕೆ.ಬಿ.ರೋಡ್ ನಾಗುಮನೆ ನಿವಾಸಿ ಗಣೇಶ (31) ಮೃತರು. ಬೈಕ್ ಸಹಿತ ಬಿದ್ದ ಅವರ ತಲೆ ರಸ್ತೆಗೆ ಅಪ್ಪಳಿಸಿದ ಕಾರಣ ಗಂಭೀರವಾಗಿ ಗಾಯಗೊಂಡರು. ಸಾರ್ವಜನಿಕರು ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿಂದ ಉಡುಪಿಗೆ ಹೋಗುವ ದಾರಿಯಲ್ಲಿ ಅವರು ಮೃತಪಟ್ಟರು.ಬೈಕ್ನ ಹಿಂಬದಿಯಲ್ಲಿ ಕುಳಿತಿದ್ದ ಅವರ ತಾಯಿ ದುರ್ಗಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರು ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾನೆ.
ಆಮಂತ್ರಣ ಕೊಡಲು ಹೊರಟಿದ್ದರು: ವಿದೇಶದಲ್ಲಿ ಉದ್ಯೋಗಿಯಾಗಿದ್ದ ಗಣೇಶ ಅವರಿಗೆ ಇದೇ 28ರಂದು ನಾಗೂರಿನ ಶಾಂತೇರಿ ಕಾಮಾಕ್ಷಿ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಬೇಕಿತ್ತು. ಅದರ ಆಮಂತ್ರಣವನ್ನು ತಮ್ಮ ಮೂಲ ಮನೆ ಪಡುಕೋಣೆಯ ಬಂಧುಗಳಿಗೆ ವಿತರಿಸಲು ಹೋಗುತ್ತಿದ್ದಾಗ ದುರಂತ ಸಂಭವಿಸಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.