ಹಳಿಯಾಳ: 24 ವರ್ಷಗಳ ನಂತರ ಪಟ್ಟಣದಲ್ಲಿ ಗ್ರಾಮದೇವಿ ಶ್ರೀಉಡಚಮ್ಮಾ ಹಾಗೂ ದ್ಯಾಮವ್ವಾ ದೇವಿಯ ಜಾತ್ರೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧ ಧಾರ್ಮಿಕ ಸ್ಥಳಗಳಾದ ದೇವಾಲಯ, ಚರ್ಚ್ ಮಸೀದಿಗಳಿಗೆ ಸಚಿವ ಆರ್.ವಿ.ದೇಶಪಾಂಡೆ ತಮ್ಮ ಸ್ವಂತ ವೆಚ್ಚದಿಂದ ಬಣ್ಣಹಚ್ಚುವ ಕಾರ್ಯಕ್ರಮವನ್ನು ಹಮ್ಮಿಕೊಂಡರು.
ಭಾನುವಾರ ಬೆಳಿಗ್ಗೆ ಸ್ಥಳಿಯ ವೆಂಕಟರಮಣ ದೇವಸ್ಥಾನದಲ್ಲಿ ಸಾಂಕೇತಿಕವಾಗಿ ಆರ್.ವಿ.ದೇಶಪಾಂಡೆ ಹಾಗೂ ಅವರ ಪತ್ನಿ ರಾಧಾ ದೇಶಪಾಂಡೆ ದೇವಸ್ಥಾನದ ಗೋಡೆಗೆ ಬಣ್ಣ ಹಚ್ಚುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ‘ವರ್ಣವಿಸ್ಯಾನ ಅಭಿಯಾನದ ಅಡಿ ಹಳಿಯಾಳದ ಪ್ರತಿಯೊಂದು ದೇವಸ್ಥಾನ, ಮಸೀದಿ, ಮಕಾನ, ದರ್ಗಾ, ಜೈನ ಬಸದಿ, ಚರ್ಚ್ ಮತ್ತಿತರರ ಧಾರ್ಮಿಕ ಕೇಂದ್ರಗಳಿಗೆ ನಾವು ನನ್ನ ಸ್ವಂತ ವೆಚ್ಚದಿಂದ ಗ್ರಾಮದೇವಿ ಜಾತ್ರಾ ನಿಮಿತ್ತವಾಗಿ ಬಣ್ಣ ಹಚ್ಚುವ ಕಾರ್ಯವನ್ನು ಕೈಗೊಂಡಿದ್ದೇನೆ. ಧಾರ್ಮಿಕ ಸಂಸ್ಥೆಯವರು ಈಗಾಗಲೇ ಬಣ್ಣ ಹಚ್ಚಿದ್ದರೇ ಅವುಗಳ ಪುನಃ ಬಣ್ಣ ಲೇಪನ ಬೇಡ ಎಂದು ಹೇಳಿದ ಅವರು ಯಾವ ಯಾವ ಧಾರ್ಮಿಕ ಸ್ಥಳಗಳಿಗೆ ಬಣ್ಣ ಹಚ್ಚುವ ಕಾರ್ಯ ಆಗಬೇಕಾಗಿದೆಯೋ ಅಂತಹವುಗಳಿಗೆ ಸ್ವಂತ ಖರ್ಚಿನಿಂದ ಬಣ್ಣ ಮಾಡಿ ಕೊಡುತ್ತೇನೆ.
ಹಳಿಯಾಳ ಪಟ್ಟಣದಲ್ಲಿ ಸರ್ವ ಧರ್ಮಿಯ ಧಾರ್ಮಿಕ ಸಂಸ್ಥೆಗಳು ಒಟ್ಟೂ 45 ಇದ್ದು ಎಲ್ಲೆಲ್ಲಿ ಅವಶ್ಯಕತೆ ಇದೆ ಅವುಗಳಿಗೆಲ್ಲ ಬಣ್ಣ ಲೇಪನ ಕಾರ್ಯವನ್ನು ಮಾಡಲಾಗುವುದು ’ ಎಂದು ಉಸ್ತುವಾರಿ ಸಚಿವ ದೇಶಪಾಂಡೆ ತಿಳಿಸಿದರು. ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಷ ಕೊರ್ವೇಕರ ಮತ್ತಿತರರು ಉಪಸ್ಥಿತರಿದ್ದರು.
* ದೇವಸ್ಥಾನ, ಮಸೀದಿ, ಮಕಾನ, ದರ್ಗಾ, ಜೈನ ಬಸದಿ, ಚರ್ಚ್ ಮತ್ತಿತರರ ಧಾರ್ಮಿಕ ಕೇಂದ್ರ ಗಳಿಗೆ ನನ್ನ ಸ್ವಂತ ವೆಚ್ಚದಿಂದ ಬಣ್ಣ ಹಚ್ಚುವ ಕಾರ್ಯ ಕೈಗೊಂಡಿದ್ದೇನೆ.
–ಆರ್.ವಿ.ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.