ಶಿರಸಿ: ಮಲೆನಾಡು ಪ್ರದೇಶ ಔಷಧ ಸಸ್ಯಗಳ ಆಗರವಾಗಿದ್ದರೂ ಪಾರಂಪರಿಕ ವೈದ್ಯ ವಿಜ್ಞಾನ ನಿರೀಕ್ಷಿತ ಮಟ್ಟದಲ್ಲಿ ಕಿರಿಯ ಮನಸ್ಸುಗಳನ್ನು ತಟ್ಟಿಲ್ಲ. ನಶಿಸಿ ಹೋಗುವ ಈ ಪದ್ಧತಿ ಉಳಿಸಿಕೊಳ್ಳುವಂತಾಗಬೇಕು ಎಂದು ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಆರ್. ವಾಸುದೇವ ಹೇಳಿದರು.
ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾರಂಪರಿಕ ನಾಟಿವೈದ್ಯ ಮಂಜುನಾಥ ಹೆಗಡೆಯವರ ‘ಚರ್ಮರೋಗ ಸಂಜೀವಿನಿ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಅಳಿವಿನ ಅಂಚಿನಲ್ಲಿರುವ ಪಾರಂಪರಿಕ ವೈದ್ಯ ಪದ್ಧತಿ ಉಳಿಸಿಕೊಳ್ಳಲು ಸಾರ್ವಜನಿಕರು ಮುಂದಾಗಬೇಕು. ನಾಟಿ ವೈದ್ಯ ಮಂಜುನಾಥ ಹೆಗಡೆಯವರು ಗಿಡಮೂಲಿಕೆ ಮತ್ತು ಅದರ ಉಪಯೋಗವನ್ನು ಕೃತಿಗಳಲ್ಲಿ ದಾಖಲಿಸಿರುವುದರಿಂದ ಮುಂದಿನ ಜನಾಂಗಕ್ಕೆ ಅದು ಬಳುವಳಿಯಾಗಲಿದೆ’ ಎಂದರು.
ಪಾರಂಪರಿಕ ವೈದ್ಯ ಸಮಿತಿಯ ಸದಸ್ಯರಿಂದ ಸನ್ಮಾನ ಸ್ವೀಕರಿಸಿದ ಹಿರಿಯ ನಾಟಿವೈದ್ಯ ಹಳ್ಳದಗದ್ದೆಯ ಗಣಪತಿ ಅನಂತ ಹೆಗಡೆ ಮಾತನಾಡಿ, ವನಸ್ಪತಿ ಔಷಧದ ಬಗ್ಗೆ ಇಂದಿನ ಪೀಳಿಗೆಗೆ ಆಸಕ್ತಿ ಮತ್ತು ನಂಬಿಕೆ ಕಡಿಮೆಯಾಗುತ್ತಿದೆ. ಆಧುನಿಕ ತಂತ್ರಜ್ಞಾನದ ಔಷಧಗಳು ವಿಪರೀತ ದುಬಾರಿಯಾಗಿದ್ದು ಜನಸಾಮಾನ್ಯರ ಕೈಗೆಟುಕುವುದಿಲ್ಲ ಎಂದರು. ನಿಸರ್ಗ ಆಸ್ಪತ್ರೆಯ ಡಾ.ವಿನಾಯಕ ಹೆಬ್ಬಾರ್ ಮಾತನಾಡಿ, ವೈದ್ಯಕೀಯ ಸಂಶೋಧನೆಗೋಸ್ಕರ ವಿಪರೀತ ಹಣ ವ್ಯಯಿಸಿದರೂ ಆರೋಗ್ಯ ಕಾಪಾಡಿಕೊಳ್ಳುವ ಆತಂಕ ನಿವಾರಣೆಯಾಗಿಲ್ಲ. ವನಸ್ಪತಿ ಔಷಧದ ಮೇಲಿರುವ ಕೀಳರಿಮೆ ತೊಲಗಬೇಕು. ಕಲಿಸುವವರಿಗೆ ಉತ್ಸುಕತೆಯಿದ್ದರೂ ಕಲಿಯುವವರು ಮುಂದೆ ಬರುತ್ತಿಲ್ಲ.
ಆಯುರ್ವೇದ ಔಷಧ ಬಳಕೆಯಿಂದ ಜೀವನ ಪರ್ಯಂತ ಆರೋಗ್ಯ ಸಿಗುತ್ತದೆ ಎಂದರು. ಗೋಪಾಲಕೃಷ್ಣ ಹೆಗಡೆ ಹೊಸಗದ್ದೆ ಅಧ್ಯಕ್ಷತೆ ವಹಿಸಿದ್ದರು. ಮಂಡ್ಯದ ಯಶಸ್ವಿನಿ ಹರೀಶ ಮತ್ತು ಪಾರಂಪರಿಕ ವೈದ್ಯ ಸಮಿತಿ ಅಧ್ಯಕ್ಷ ಎಸ್.ಎಂ.ಹೆಗಡೆ ಮಕ್ಕಳತಾಯಿಮನೆ ಉಪಸ್ಥಿತರಿದ್ದರು. ಕೃತಿಕಾರ ಮಂಜುನಾಥ ಹೆಗಡೆ ಹೂಡ್ಲಮನೆ ಸ್ವಾಗತಿಸಿದರು. ರಾಮಚಂದ್ರ ಭಟ್ಟ ದೇವಗೊಡ್ಲು ಕೃತಿ ಪರಿಚಯಿಸಿದರು. ಶೋಭಾ ಹೆಗಡೆ ತಾರಗೋಡ ಅನಿಸಿಕೆ ವ್ಯಕ್ತಪಡಿಸಿದರು. ದತ್ತಗುರು ಕಂಠಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.