ADVERTISEMENT

ಪ್ರವಾಸೋದ್ಯಮ ಮೇಲೆ ಕರಿನೆರಳ ಛಾಯೆ

ಹೊನ್ನಾವರ ಗಲಭೆ: ಮುರ್ಡೇಶ್ವರ, ಗೋಕರ್ಣದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ

ಪಿ.ಕೆ.ರವಿಕುಮಾರ
Published 21 ಡಿಸೆಂಬರ್ 2017, 9:35 IST
Last Updated 21 ಡಿಸೆಂಬರ್ 2017, 9:35 IST
ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿರುವ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರ.
ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿರುವ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರ.   

ಕಾರವಾರ: ಹೊನ್ನಾವರದ ಗಲಭೆ ಪ್ರಕರಣ ಜಿಲ್ಲೆಯ ಪ್ರವಾಸೋದ್ಯಮಕ್ಕೂ ಕರಿನೆರಳು ಬಿದ್ದಿದೆ. ಜನರಿಂದ ಸದಾ ಗಿಜಿಗಿಡುತ್ತಿದ್ದ ಮುರ್ಡೇಶ್ವರ, ಗೋಕರ್ಣ ಹಾಗೂ ಕಾರವಾರದ ಪ್ರವಾಸಿ ತಾಣಗಳು ಬಿಕೋ ಎನ್ನುತ್ತಿದ್ದು, ಪ್ರವಾಸಿಗರ ಸಂಖ್ಯೆ ತುಂಬಾ ವಿರಳವಾಗಿದೆ.

ಹೊನ್ನಾವರದ ಚಂದಾವರದಲ್ಲಿ ಡಿ.6ರಂದು ಉಂಟಾದ ಕೋಮುಗಲಭೆಯು ಹಿಂದೂ ಯುವಕ ಪರೇಶ್‌ ಮೇಸ್ತನ ಸಾವಿನಿಂದ ಇನ್ನಷ್ಟು ಉದ್ವಿಗ್ನಗೊಂಡಿತು. ಪರೇಶ್‌ ಸಾವಿಗೆ ಕಾರಣರಾದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಕುಮಟಾ, ಕಾರವಾರ ಹಾಗೂ ಶಿರಸಿಯಲ್ಲಿ ನಡೆಸಿದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ ತಲ್ಲಣ ಸೃಷ್ಟಿಸಿತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುಳ್ಳು ಸುದ್ದಿ ಹಾಗೂ ವದಂತಿಯು ಜಿಲ್ಲೆಯ ಪರಿಸ್ಥಿತಿಯನ್ನು ಮತ್ತಷ್ಟು ಪ್ರಕ್ಷುಬ್ಧಗೊಳಿಸಿತು.

ಪ್ರವಾಸಿಗರು ವಿಮುಖ: ಸುಮಾರು 10–15 ದಿನಗಳು ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗಳು ಎಲ್ಲರನ್ನು ಬೆಚ್ಚಿಬೀಳಿಸಿತು. ಅಲ್ಲದೇ ಇದನ್ನು ತಿಳಿದ ಪ್ರವಾಸಿಗರು ಸಹ ಜಿಲ್ಲೆಯ ಪ್ರವಾಸಿ ತಾಣಗಳಿಂದ ವಿಮುಖರಾದರು. ಉದ್ಯೋಗಿಗಳು ವರ್ಷಾಂತ್ಯದಲ್ಲಿ ಬಾಕಿ ಉಳಿದ ರಜೆಗಳನ್ನು ಒಟ್ಟಿಗೆ ತೆಗೆದುಕೊಂಡು ಕುಟುಂಬ ಸಮೇತ ಪ್ರವಾಸಿ ತಾಣಗಳಿಗೆ ಲಗ್ಗೆ ಹಾಕುತ್ತಾರೆ. ಹೀಗಾಗಿ ಡಿಸೆಂಬರ್‌ ತಿಂಗಳಲ್ಲಿ ಜಿಲ್ಲೆಯ ಮುರ್ಡೇಶ್ವರ, ಗೋಕರ್ಣ, ಓಂ ಬೀಚ್‌, ಕುಡ್ಲೆ ಬೀಚ್‌, ಕಾರವಾರ ಕಡಲತೀರ ಹಾಗೂ ಇನ್ನಿತರ ತಾಣಗಳಲ್ಲಿ ಪ್ರವಾಸಿಗರ ಕಲರವ ಕಂಡುಬರುತ್ತಿತ್ತು. ಆದರೆ ಈ ಬಾರಿ ಬೆರಳೆಣಿಕೆಯಷ್ಟು ಪ್ರವಾಸಿಗರು ಮಾತ್ರ ಇದ್ದಾರೆ.

ADVERTISEMENT

ರೆಸಾರ್ಟ್‌, ಹೋಟೆಲ್‌ ಉದ್ಯಮಕ್ಕೂ ಹೊಡೆತ: ಪ್ರವಾಸಿಗರ ಸಂಖ್ಯೆ ಕುಸಿದಿರುವುದರಿಂದ ರೆಸಾರ್ಟ್‌, ಹೋಟೆಲ್‌ ಹಾಗೂ ಪ್ರವಾಸಿಗರ ಅವಲಂಬಿತ ಉದ್ಯಮಗಳು ಲಾಭವಿಲ್ಲದೇ ನೆಲಕಚ್ಚಿವೆ. ಪ್ರವಾಸಿ ತಾಣಗಳಲ್ಲಿನ ಸಣ್ಣ ಪುಟ್ಟ ವ್ಯಾಪಾರಿಗಳು ಸಹ ಪ್ರವಾಸಿಗರನ್ನು ಎದುರು ನೋಡುವಂತಾಗಿದೆ.

‘ಟೂರಿಸ್ಟ್‌ ಏಜೆನ್ಸಿ ಮೂಲಕ ಸುಮಾರು 200 ಮಂದಿ ರಷ್ಯನ್ ಪ್ರವಾಸಿಗರು ಗೋವಾದಿಂದ ನಿತ್ಯ ಗೋಕರ್ಣ, ಮುರ್ಡೇಶ್ವರ ಹಾಗೂ ಇನ್ನಿತರ ತಾಣಗಳಿಗೆ ಭೇಟಿ ನೀಡಿ ವಾಪಸ್‌ ಆಗುತ್ತಿದ್ದರು. ಗಲಭೆ ಕಾರಣಕ್ಕಾಗಿ 10 ದಿನಗಳು ಟೂರಿಸ್ಟ್‌ ಬಸ್‌ ಇತ್ತ ಸುಳಿದಿಲ್ಲ. ರಾಜ್ಯದ ನಾನಾ ಭಾಗಗಳಿಂದ ಬರುವ ಪ್ರವಾಸಿಗರ ಸಂಖ್ಯೆಯು ಇಳಿಮುಖವಾಗಿದೆ. ಹೋಟೆಲ್‌, ರೆಸಾರ್ಟ್‌ ಉದ್ಯಮಗಳಿಗೆ ಇದರಿಂದ ಬಿಸಿ ತಟ್ಟಿದೆ.’ ಎನ್ನುತ್ತಾರೆ ಗೋಕರ್ಣದ ಉದ್ಯಮಿ ನಾಗೇಶ್‌ ಗೌಡ.

ಸ್ವಲ್ಪ ಚೇತರಿಕೆ: ‘ಜಿಲ್ಲೆಯ ಪರಿಸ್ಥಿತಿಯು ಶಾಂತವಾಗಿದ್ದು, ಗಲಭೆ ಪೀಡಿತ ಪ್ರದೇಶಗಳ ಜನಜೀವನ ಸಹಜಸ್ಥಿತಿಗೆ ಬಂದಿದೆ. ಹೀಗಾಗಿ ಕಳೆದೆರಡು ದಿನಗಳಿಂದ ಪ್ರವಾಸಿ ತಾಣಗಳತ್ತ ಜನರು ಮುಖ ಮಾಡುತ್ತಿದ್ದಾರೆ. ಹೊಸ ವರ್ಷಕ್ಕೆ ಇನ್ನೂ 10 ದಿನಗಳು ಬಾಕಿ ಇರುವುದರಿಂದ ಹೆಚ್ಚಿನ ಪ್ರವಾಸಿಗರ ನಿರೀಕ್ಷೆಯಲ್ಲಿದ್ದೇವೆ’ ಎನ್ನುತ್ತಾರೆ ವ್ಯಾಪಾರಿ ವಿನಯ್‌ ನಾಯ್ಕ.

*
ಅಹಿತಕರ ಘಟನೆಗಳಿಂದ ಪ್ರವಾಸಿ ತಾಣಗಳು ಕೆಲ ದಿನಗಳು ಕಳೆಗುಂದಿದ್ದವು. ಆದರೆ ಇದೀಗ ಪ್ರವಾಸಿಗರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ.
–ರವಿದಾಸ್‌ ವಾಲೇಕರ್‌, ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.