ಕಾರವಾರ: ‘ಬಡ ಮೀನುಗಾರರಿಗೆ ಸರ್ಕಾರ ನೀಡುವ ರಿಯಾಯಿತಿ ದರದ ಸೀಮೆಎಣ್ಣೆಯ ಸರಬರಾಜು ಸರಿಯಾಗಿ ಆಗುತ್ತಿಲ್ಲ’ ಎಂದು ಆರೋಪಿಸಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ವತಿಯಿಂದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಬುಧವಾರ ದೂರು ಸಲ್ಲಿಸಲಾಯಿತು.
‘ಮೀನುಗಾರಿಕಾ ದೋಣಿಗಳಿಗೆ ಅವಶ್ಯವಿರುವ ಸೀಮೆಎಣ್ಣೆಯನ್ನು ಸರ್ಕಾರ ರಿಯಾಯಿತಿ ದರದಲ್ಲಿ ಮೀನುಗಾರರಿಗೆ ಒದಗಿಸುತ್ತಿತ್ತು. ಆದರೆ ಇತ್ತೀಚಿಗೆ ಅದರ ವಿತರಣೆಯಲ್ಲಿ ಲೋಪ ಉಂಟಾಗಿದ್ದು, ಪ್ರತಿ ತಿಂಗಳು ಅದು ಸರಿಯಾಗಿ ದೊರೆಯುತ್ತಿಲ್ಲ’ ಎಂದು ದೂರಿದರು.
ಸೀಮೆಎಣ್ಣೆ ವಿತರಿಸುವ ನ್ಯಾಯಬೆಲೆ ಅಂಗಡಿಕಾರರನ್ನು ಈ ಬಗ್ಗೆ ವಿಚಾರಿಸಿದರೆ, ‘ಮೀನುಗಾರರಿಗೆ ಈ ಬಾರಿ ಸೀಮೆಎಣ್ಣೆ ಬಂದಿಲ್ಲ’ ಎಂದು ಹೇಳುತ್ತಿದ್ದಾರೆ. ಅದು ಪೂರೈಕೆಯಾಗದಿದ್ದಲ್ಲಿ ಮೀನುಗಾರಿಕೆಗೆ ತೊಂದರೆ ಉಂಟಾಗಲಿದೆ. ಅಲ್ಲದೇ ಬಡ ಮೀನುಗಾರರು ಕೆಲಸವಿಲ್ಲದೇ ಪರ
ದಾಡಬೇಕಾಗುತ್ತದೆ. ಅವರ ಕುಟುಂಬ ಉಪವಾಸ ಬೀಳಬೇಕಾಗುತ್ತದೆ ಎಂದು ಅವಲತ್ತುಕೊಂಡರು.
‘ಮೀನುಗಾರರಿಗೆ ಅಗತ್ಯವಿರುವ ಸೀಮೆಎಣ್ಣೆಯನ್ನು ಒದಗಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಭರವಸೆ ನೀಡಿದರು.
ಮೀನುಗಾರ ಮುಖಂಡ ಶ್ರೀಪಾದ ಕೊಚ್ರೇಕರ್, ಪಾಂಡುರಂಗ ತದಡಿಕರ್, ಸದಾನಂದ ಮಾಜಾಳಿಕರ್, ಸಂತೋಷ ಕೊಚ್ರೇಕರ್, ವಿಘ್ನೇಶ್ ಮಾಜಾಳಿಕರ್, ಬಾಳಾ ಕೋಡಾರಕರ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.