ADVERTISEMENT

ಬೀದಿ ನಾಯಿಗಳಿಗೆ ಬೇಸತ್ತ ಜನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 5:08 IST
Last Updated 21 ಸೆಪ್ಟೆಂಬರ್ 2017, 5:08 IST

ಮುಂಡಗೋಡ: ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಕೆಲ ದಿನಗಳಿಂದ ನಾಯಿಗಳ ಹಿಂಡು, ಜನನಿಬಿಡ ಪ್ರದೇಶದಲ್ಲಿಯೇ ಗುಂಪು ಗುಂಪಾಗಿ ಕಾಣಿಸಿಕೊಂಡು ಆತಂಕ ಮೂಡಿಸುತ್ತಿವೆ.

ಇಲ್ಲಿಯ ಶಿವಾಜಿ ಸರ್ಕಲ್‌, ಬಸವೇಶ್ವರ ನಗರ, ಆನಂದ ನಗರ, ಗಾಂಧಿನಗರ ಸೇರಿದಂತೆ ಹಲವು ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಗುಂಪು ಮನೆಯ ಆವರಣ, ಶಾಲಾ ಆವರಣದಲ್ಲಿ ನುಗ್ಗುತ್ತಿವೆ. ಇದರಿಂದಾಗಿ ಜನರು ಭಯದಿಂದ ಓಡಾಡುವಂತಾಗಿದೆ ಎಂದು ಸ್ಥಳೀಯರು ದೂರಿದರು.

‘ಹದಿನೈದು ದಿನದಿಂದ ಮನೆಯ ಸುತ್ತಮುತ್ತ ಬೀದಿ ನಾಯಿಗಳ ಗುಂಪು ಓಡಾಡುತ್ತಿವೆ. ಕೆಲವೊಮ್ಮೆ ಮನೆಯ ಆವರಣದೊಳಗೆ ನುಗ್ಗಿ ಬರುತ್ತಿವೆ. ಬೆಳಿಗ್ಗೆ, ರಾತ್ರಿ ಸಮಯದಲ್ಲಿ ನಾಯಿಗಳ ಬೊಗಳುವಿಕೆ ವಿಪರೀತವಾಗಿದೆ. ಈ ಬಗ್ಗೆ ಪಟ್ಟಣ ಪಂಚಾಯ್ತಿಯವರು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಹೊಸ ಓಣಿ ನಿವಾಸಿ ಬಾಬಣ್ಣ ವಾಲ್ಮೀಕಿ ಒತ್ತಾಯಿಸಿದರು.

ADVERTISEMENT

‘ಶಾಲೆಗೆ ಹೋಗುವ ಮಕ್ಕಳು ಬೀದಿ ನಾಯಿಗಳನ್ನು ಕಂಡು ಹೆದರುತ್ತಿದ್ದಾರೆ. ಮನೆಯ ಸುತ್ತಮುತ್ತ ಚಿಕ್ಕ ಮಕ್ಕಳು ಆಟವಾಡುತ್ತಿರುತ್ತಾರೆ. ಇಂತಹ ಸಮಯದಲ್ಲಿ ನಾಯಿಗಳು ದಾಳಿ ಮಾಡಿದರೇ ಯಾರು ಹೊಣೆ?’ ಎಂದು ಬಸವೇಶ್ವರ ನಗರ ನಿವಾಸಿ ಮಂಜುನಾಥ ಹರಮಲಕರ ಪ್ರಶ್ನಿಸಿದರು.

ನಿಯಂತ್ರಣಕ್ಕೆ ಕ್ರಮ: ‘ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಬೀದಿ ನಾಯಿಗಳನ್ನು ಹಿಡಿದು ಬೇರೆಡೆ ಸಾಗಿಸಲು, ಇತ್ತೀಚೆಗೆ ನಡೆದ ಪಟ್ಟಣ ಪಂಚಾಯ್ತಿ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಶೀಘ್ರ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಬರಲಿದೆ’ ಎಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮಹಮದ್ ರಫೀಕ್‌ ಇನಾಂದಾರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.