ADVERTISEMENT

ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ ಕೈಗೊಳ್ಳಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 9:58 IST
Last Updated 16 ಜುಲೈ 2017, 9:58 IST

ಕಾರವಾರ: ‘ತಾಲ್ಲೂಕಿನಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮ ಕೈಗೊಳ್ಳಬೇಕು. ಜನರಿಗೆ ಯಾವುದೇ ಸಮಸ್ಯೆ ಆಗದಂತೆ ಎಲ್ಲರೂ ಎಚ್ಚರ ವಹಿಸಬೇಕು’ ಎಂದು ಶಾಸಕ ಸತೀಶ್‌ ಸೈಲ್‌ ಅಧಿಕಾರಿಗಳಿಗೆ ಸೂಚಿಸಿದರು. ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ತಾಲ್ಲೂಕಿನ ಹರಿದೇವನಗರದಲ್ಲಿ ಒಂದು ಡೆಂಗಿ ಪ್ರಕರಣ ಪತ್ತೆಯಾಗಿದೆ. ಚರಂಡಿಗಳನ್ನು ನಗರಸಭೆ ಸ್ವಚ್ಛಗೊಳಿ ಸದ ಕಾರಣ ಮಳೆ ನೀರು ಸರಾಗವಾಗಿ ಹರಿದುಹೋಗುತ್ತಿಲ್ಲ. ಇದರಿಂದ ಸುತ್ತ ಮುತ್ತಲಿನ ಪ್ರದೇಶದಲ್ಲಿ ರೋಗ ಹೆಚ್ಚಾ ಗುವ ಭೀತಿ ಎದುರಾಗಿದೆ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಸೂರಜಾ ನಾಯ್ಕ ಹೇಳಿದರು.

‘ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಲಾರ್ವಾಗಳನ್ನು ನಾಶ ಪಡಿಸಲು ನಗರಸಭೆಯು ಫಾಗಿಂಗ್‌ ಕಾರ್ಯ ಕೂಡ ಮಾಡುತ್ತಿಲ್ಲ. ಸಾಂಕ್ರಾಮಿಕ ರೋಗಕ್ಕೆ ಇದು ಕಾರಣವಾಗಿದ್ದು, ಕಳೆದ ವರ್ಷವೂ ಕೂಡ ಇದೇ ರೀತಿಯ ಪರಿಸ್ಥಿತಿ ಇತ್ತು. ನಗರಸಭೆಯು ಸ್ವಚ್ಛತೆಗೆ ಹೆಚ್ಚು ಲಕ್ಷ್ಯ ವಹಿಸಬೇಕು’ ಎಂದರು.

ADVERTISEMENT

ಪರಿಶೀಲನೆಗೆ ಸೂಚನೆ: ‘ನಗರಸಭೆ ಅಧಿಕಾರಿಗಳು ಎಲ್ಲದಕ್ಕೂ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ನಿಮ್ಮ ಪರಿಸರ ಅಧಿಕಾರಿಗಳಿಗೆ ಈ ಬಗ್ಗೆ ಪರಿಶೀಲನೆ ನಡೆಸುವಂತೆ ತಿಳಿಸಬೇಕು’ ಎಂದು ಸತೀಶ್ ಸೈಲ್ ನಗರಸಭೆಯ ಎಇಇ ಕೆ.ಎಂ.ಮೋಹನ್‌ರಾಜ್‌ಗೆ ಸೂಚಿಸಿದರು.

‘ಮುಡಗೇರಿಯಲ್ಲಿ 40 ಹಾಸಿಗೆಯ ಆರೋಗ್ಯ ಕೇಂದ್ರ ತೆರೆಯಲು ಪ್ರಸ್ತಾವ ಸಲ್ಲಿಸಲಾಗಿತ್ತು. ಅದರ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿ ಬಳಿ ಮಾಹಿತಿ ಪಡೆದು ತಿಳಿಸಿ’ ಎಂದು ಶಾಸಕರು ಸೂರಜಾ ನಾಯ್ಕಗೆ ಹೇಳಿದರು. 

ಹೊರಗುತ್ತಿಗೆ ನೌಕರರ ಮಾಹಿತಿ ನೀಡಿ: ‘ತಾಲ್ಲೂಕಿನ ಎಲ್ಲ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರು ಯಾವಾಗಿಂದ, ಎಷ್ಟು ಮಂದಿ, ಯಾವ ಗುತ್ತಿಗೆದಾರ ಏಜೆನ್ಸಿಯಿಂದ ಕಾರ್ಯ ನಿರ್ವಹಿಸುತ್ತಿ ದ್ದಾರೆ. ಅವರಿಗೆ ಎಷ್ಟು ವೇತನ ಪಾವತಿ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಪ್ರತಿಯೊಂದು ಇಲಾಖೆಯವರು ನೀಡ ಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ನಮ್ಮಿಂದಲೇ ಅಭಿವೃದ್ಧಿ’: ‘ನಮ್ಮ ಗ್ರಾಮ– ನಮ್ಮ ರಸ್ತೆ ಯೋಜನೆಯಡಿ ಕಾರವಾರ– ಅಂಕೋಲಾ ತಾಲ್ಲೂಕಿಗೆ ಈ ಬಾರಿಯೂ ಅನುದಾನ ಬಿಡುಗಡೆ ಆಗಿದೆ. ಆದರೆ, ನಮ್ಮ ಅಧಿಕಾರದ ಅವಧಿಗೂ ಮುನ್ನ ಆಡಳಿತ ನಡೆಸಿದ ಪ್ರತಿನಿಧಿಗಳು ಜನವಸತಿ ಇಲ್ಲದೇ ಇರುವ, ಜನರಿಗೆ ಉಪಯೋಗವಿಲ್ಲದ ಕಡೆಗಳಲ್ಲಿ ಬೇಕಾಬಿಟ್ಟಿ ರಸ್ತೆ ನಿರ್ಮಾಣ ಮಾಡಿದ್ದರು.

ಆದರೆ ನನ್ನ ಅವಧಿಯಲ್ಲಿ ಈ ಯೋಜನೆಯ ಅನುದಾನವನ್ನು ಸದ್ಬಳಕೆ ಮಾಡಿದ್ದು, ಜನವಸತಿ ಇರುವ ಪ್ರದೇಶಗಳಿಗೆ ರಸ್ತೆ ನಿರ್ಮಾಣ ಮಾಡಿಕೊಡಲಾಗಿದೆ’ ಎಂದು ಹೇಳಿದರು. ‘ಈ ಯೋಜನೆಯಲ್ಲಿ ಜಮೀನು, ಮರಗಳನ್ನು ಕಳೆದುಕೊಂಡವರಿಗೆ ಶೀಘ್ರ ಪರಿಹಾರ ಒದಗಿಸಬೇಕು’ ಎಂದು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ಅಧಿಕಾರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.