ಕಾರವಾರ: ‘ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಹಿಂದೆ ಉಳಿದಿರುವವರು ಎಲ್ಲದರಲ್ಲೂ ಸದೃಢರಾಗಬೇಕು. ಆಗಮಾತ್ರ ಡಾ.ಬಿ.ಆರ್.ಅಂಬೇಡ್ಕರ್ ಕನಸು ನನಸಾಗಲು ಸಾಧ್ಯ’ ಎಂದು ಬೌದ್ಧ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಭಾಲ್ಕೆ ಹೇಳಿದರು.
ಬೌದ್ಧ ಮಹಾಸಭಾದ ಜಿಲ್ಲಾ ಘಟಕವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಬುದ್ಧ ಬೆಳದಿಂಗಳು– ಯುವ ಚಿಂತನ ಶಿಬಿರ’ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸಮಾನತೆ, ಸಹಬಾಳ್ವೆಯ ಮೂಲ ಸಂದೇಶ ಹೊತ್ತಿರುವ ಬೌದ್ಧ ಧರ್ಮ ಸಮಾಜದಲ್ಲಿ ಶಾಂತಿ ಕಾಪಾಡುವ ಉದ್ದೇಶ ಹೊಂದಿತ್ತು. ಈ ಕಾರಣದಿಂದಲೇ ಅಂಬೇಡ್ಕರ್ ಈ ಧರ್ಮದ ದೀಕ್ಷೆ ಪಡೆಯಲು ಪ್ರೇರಣೆಯಾಗಿತ್ತು’ ಎಂದರು.
ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವೀರಶೆಟ್ಟಿ ದೀನೆ ಮಾತನಾಡಿ, ‘ಶಾಂತಿ ಪ್ರಿಯ ಗೌತಮ ಬುದ್ಧನ ವಿಚಾರಧಾರೆಗಳು ಸಾಮಾಜಿಕ ಬದಲಾವಣೆಗೆ ಮುನ್ನುಡಿಯಾಗಿತ್ತು’ ಎಂದರು. ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಎಂ.ಮೋಹನರಾಜ್, ‘ಅಂಬೇಡ್ಕರರ ಮೂಲಚಿಂತನೆ ಜನರಲ್ಲಿ ಸಮಾನತೆ ಬಿತ್ತುವುದಾಗಿದೆ. ಬೌದ್ಧ ತತ್ವಗಳಲ್ಲೂ ಇದೇ ವಿಚಾರವಿದೆ’ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ದೀಪಕ ಕುಡಾಳಕರ್, ತಾಲ್ಲೂಕು ಸಂಚಾಲಕ ಶ್ಯಾಮಸುಂದರ್ ಗೋಕರ್ಣ, ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಬಡಿಗೇರ, ಎಲಿಷಾ ಎಲಕಪಾಟಿ, ಸಂತೋಷ ನಾಯಕ, ವಿನಾಯಕ ಕರ್ನಿಂಗ್, ಸುಧೀರ್ ಮಾನೆ ಮಾತನಾಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಸುಧಾಕರ ಜೊಗಳೇಕರ್, ಪ್ರೊ.ನಿತ್ಯಾನಂದ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.