ADVERTISEMENT

ಹೊನ್ನಾವರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಾಳೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2015, 7:04 IST
Last Updated 6 ಮಾರ್ಚ್ 2015, 7:04 IST

ಹೊನ್ನಾವರ: ತಾಲ್ಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾಸರಕೋಡಿನ ಜನತಾ ವಿದ್ಯಾಲಯದ ಕ್ರೀಡಾಂಗಣದಲ್ಲಿ ಇದೇ 7ರಂದು ನಡೆಯಲಿದೆ.

ಅಂದು ಬೆಳಿಗ್ಗೆ 8.30ಕ್ಕೆ ತಹಶೀಲ್ದಾರ್‌ ಜಿ.ಎಂ.ಬೋರ್ಕರ್ ರಾಷ್ಟ್ರಧ್ವಜಾರೋಹಣ ಹಾಗೂ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರೋಹಿದಾಸ ನಾಯಕ ಪರಿಷತ್ತಿನ ಧ್ವಜಾರೋಹಣ ನೆರವೇರಿಸುವರು. ಸಮ್ಮೇಳನಾಧ್ಯಕ್ಷರ ಮೆರವಣಿಗೆಯ ನಂತರ 9.30ಕ್ಕೆ ಗೇರು ನಿಗಮದ ಅಧ್ಯಕ್ಷ ಶಂಭು ಗೌಡ ಸಮ್ಮೆಳನದ ಉದ್ಘಾಟನೆ ಮಾಡಲಿದ್ದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಎಸ್.ಡಿ.ಹೆಗಡೆ ಸ್ವಾಗತ ಭಾಷಣ ಹಾಗೂ ಜಾನಪದ ವಿದ್ವಾಂಸ ಜಿ.ಎಸ್.ಭಟ್ಟ ಮೈಸೂರು ಆಶಯ ಭಾಷಣ ಮಾಡುವರು.

5ನೇ ಸಮ್ಮೆಳನದ ಅಧ್ಯಕ್ಷ ಡಾ.ಎಸ್.ಡಿ.ಶೆಟ್ಟಿ ಕನ್ನಡ ಬಾವುಟ ಹಸ್ತಾಂತರಿಸಲಿದ್ದು ಶಿಕ್ಷಣ ಸಂಯೋಜಕ ಎಸ್.ಎಂ.ಹೆಗಡೆ ಸಮ್ಮೆಳನಾಧ್ಯಕ್ಷರನ್ನು ಪರಿಚಯಿಸುವರು. ಸಮ್ಮೇಳನಾಧ್ಯಕ್ಷ ವೆಂ.ಭ.ವಂದೂರು ಅವರ ಅಧ್ಯಕ್ಷೀಯ ಭಾಷಣ, ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಂದ ಪುಸ್ತಕ ಬಿಡುಗಡೆ, ಅಶೋಕ ಕಾಸರಕೋಡ ಅವರಿಂದ ಪುಸ್ತಕ ಮಳಿಗೆ ಉದ್ಘಾಟನೆ, ಸತೀಶ ಭಟ್ಟ ಅವರಿಂದ ಪುಸ್ತಕ ಪರಿಚಯ ನಡೆಯುವುದು.

11.30ಕ್ಕೆ ನಡೆಯುವ ‘ತಾಲ್ಲೂಕು ಅವಲೋಕನ’ ಮೊದಲ ಗೋಷ್ಠಿಯಲ್ಲಿ ಶಂಕರ ಹರಿಕಾಂತ,ಪ್ರೊ.ಎಂ.ಜಿ.ನಾಯ್ಕ ವಿವಿಧ ವಿಷಯಗಳನ್ನು ಮಂಡಿಸಲಿದ್ದು ಉಪನ್ಯಾಸಕ ಡಾ.ಸುರೇಶ ನಾಯ್ಕ ಅಧ್ಯಕ್ಷತೆ ವಹಿಸುವರು.

ಮಧ್ಯಾಹ್ನ 2ಕ್ಕೆ ನಡೆಯುವ ಕವಿಗೋಷ್ಠಿಯಲ್ಲಿ ಜಿ.ಎನ್.ಹೆಗಡೆ, ಮಾಸ್ತಿ ಗೌಡ, ಮಾದೇವಿ ಭಂಡಾರಿ, ಪ್ರಶಾಂತ ಹೆಗಡೆ, ಸಿದ್ಧಲಿಂಗಸ್ವಾಮಿ, ರತ್ನಾ ಪಟಗಾರ, ಜಿ.ಎಸ್.ಹೆಗಡೆ, ಕೆ.ಎಲ್.ಶಾನಭಾಗ, ಸುಧಾ ಭಂಡಾರಿ, ಸಹನಾ ಭಂಡಾರಿ, ಶಂಕರ ಗೌಡ, ವಿದ್ಯಾಧರ ನಾಯ್ಕ, ಮಾರುತಿ ಶೇಟ್, ರಮೇಶ ಹೆಗಡೆ, ವಿನಾಯಕ ನಾಯ್ಕ, ಕುಸುಮಾ ನಾಯ್ಕ, ಶಂಭು ಹೆಗಡೆ ಕವನ ವಾಚಿಸಲಿದ್ದು ಡಾ.ಇಸ್ಮಾಯಿಲ್ ತಲಖಣಿ ಅಧ್ಯಕ್ಷತೆ ವಹಿಸುವರು.

ಸಂಜೆ 3.30ಕ್ಕೆ ನಡೆಯುವ ಸಮ್ಮೇಳನದ ಅಧ್ಯಕ್ಷರೊಂದಿಗೆ ಸಂವಾದದಲ್ಲಿ ಡಾ.ಶ್ರೀಪಾದ ಶೆಟ್ಟಿ ಆಶಯ ನುಡಿಗಳನ್ನಾಡಲಿದ್ದು ಸುರೇಶ ನಾಯ್ಕ, ಎನ್.ಎಸ್.ಹೆಗಡೆ, ನಾರಾಯಣ ಶಾಸ್ತ್ರಿ, ಎಂ.ಡಿ.ಹರಿಕಾಂತ, ಸಂದೀಪ ಭಟ್ಟ, ಸಾಧನಾ ಬರ್ಗಿ, ಎಂ.ಎಸ್.ಹೆಗಡೆ ಸಂವಾದದಲ್ಲಿ ಭಾಗವಹಿಸುವರು.

ಶಾಸಕ ಮಂಕಾಳ ಎಸ್.ವೈದ್ಯ ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಕವಿ ವಿ.ಜಿ.ಭಂಡಾರಿ, ಕಲಾವಿದ ಜಿ.ಡಿ.ಭಟ್ಟ ಕೆಕ್ಕಾರ ಅತಿಥಿಗಳಾಗಿ ಭಾಗವಹಿಸುವರು.

ಜಾನಪದ ಹಾಡುಗಾರ್ತಿ ನಾಗಿ ಮುಕ್ರಿ, ಯಕ್ಷಗಾನ ಕಲಾವಿದರಾದ ಚಂದ್ರಹಾಸ ಹುಡಗೋಡು, ಶ್ರೀಪಾದ ಹೆಗಡೆ ಹಡಿನಬಾಳ, ಪತ್ರಕರ್ತ ಜಿ.ಯು.ಭಟ್ಟ, ಭರತನಾಟ್ಯ ಶಿಕ್ಷಕ ಡಿ.ಡಿ.ನಾಯ್ಕ, ಯೋಗಪಟು ಧನ್ಯಾ ನಾಯ್ಕ ಹಾಗೂ ಸುಚಿತ್ರ ನಾಯ್ಕ ಅವರನ್ನು ಸನ್ಮಾನಿಸಲಾಗುವುದು. ಜಾನಪದ ವಿದ್ವಾಂಸ ಡಾ.ಎನ್.ಆರ್.ನಾಯಕ ಇವರನ್ನು ಸನ್ಮಾನಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.