ADVERTISEMENT

ಕಟ್ಟಡ ತೆರವು: ಪ್ರೌಢ ಶಾಲೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2017, 11:25 IST
Last Updated 11 ಏಪ್ರಿಲ್ 2017, 11:25 IST
ಕಟ್ಟಡ ತೆರವು: ಪ್ರೌಢ ಶಾಲೆಗೆ ಸೂಚನೆ
ಕಟ್ಟಡ ತೆರವು: ಪ್ರೌಢ ಶಾಲೆಗೆ ಸೂಚನೆ   

ಬಸವನಬಾಗೇವಾಡಿ:  ಇಲ್ಲಿನ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಕಟ್ಟಡ ತೆರವುಗೊಳಿಸುವಂತೆ ಕೂಡಲ ಸಂಗಮದ ಅಭಿವೃದ್ಧಿ ಮಂಡಳಿ ತಿಳಿಸಿದ್ದರಿಂದ ವಿದ್ಯಾರ್ಥಿನಿಯರ ಪಾಲಕರಿಂದ  ವಿರೋಧ ವ್ಯಕ್ತವಾಗಿದೆ.

ಸುಸಜ್ಜಿತ ಕಟ್ಟಡದಲ್ಲಿ ಕಳೆದ ಕೆಲ ವರ್ಷಗಳಿಂದ ಶಿಕ್ಷಣ ಪಡೆಯುತ್ತಿರುವ 450ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಅನುಕೂಲಕರವಾದ ಸ್ಥಳವಾಗಿದೆ. ಪಟ್ಟಣಕ್ಕೆ ಬಾಲಕಿಯರ ಪ್ರೌಢ ಶಾಲೆ ಮಂಜೂರಾದ ನಂತರ ಪ್ರಾಧಿಕಾರ ದವರು ದೇವಸ್ಥಾನದ ಆವರಣದಲ್ಲಿ ನಿರ್ಮಾಣ ಮಾಡಿರುವ ಸುಸಜ್ಜಿತ ಕಟ್ಟಡವನ್ನು ಪ್ರೌಢ ಶಾಲೆಯ ತರಗತಿಗಳು ನಡೆಯಲು ಅನುಕೂಲವಾಗುವ ಉದ್ದೇಶದಿಂದ  ಬಿಟ್ಟುಕೊಟ್ಟಿದ್ದರು.

ಈಗ ಬಸವೇಶ್ವರ ದೇವಸ್ಥಾನದ ಅಡಿಯಲ್ಲಿ ನಡೆಯುತ್ತಿರುವ ಹಿರಿಯ ಪ್ರಾಥಮಿಕ ಶಾಲೆಗೆ ಕಟ್ಟಡ ಬಳಸಿ ಕೊಳ್ಳುವ ಉದ್ದೇಶದಿಂದ ಪ್ರೌಢ ಶಾಲೆ ಯನ್ನು ತೆರವುಗೊಳಿಸುವಂತೆ ತಿಳಿಸಲಾಗಿದೆ  ಎಂದು ಹೇಳಲಾಗುತ್ತಿದೆ. ಆದರೆ ಈಗಿರುವ ಪ್ರಾಧಿಕಾರದ ಸುಸಜ್ಜಿತ ಕಟ್ಟಡವು ಪ್ರೌಢ ಶಾಲೆಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಹೊಂದಿದೆ. ಅಲ್ಲದೇ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರಿಗೆ ಶಾಲೆಗೆ ಬರಲು ಬಸ್‌ನಿಲ್ದಾಣ ಸಮೀಪದಲ್ಲಿದೆ. ಪಟ್ಟಣದ ವಿದ್ಯಾರ್ಥಿನಿಯರಿಗೆ ಸೂಕ್ತ ಸ್ಥಳ ವೆನಿಸಿದ್ದರಿಂದ ಈಗಿರುವ ಕಟ್ಟಡ ದಲ್ಲಿಯೇ ಪ್ರೌಢ ಶಾಲೆಯನ್ನು ಮುಂದು ವರಿಸಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.

ADVERTISEMENT

ಈಗಿರುವ ಬಸವೇಶ್ವರ ದೇವಸ್ಥಾನದ ಒಳ ಆವರಣದ ಕೊಠಡಿಗಳಲ್ಲಿ ಬಸವೇಶ್ವರ ದೇವಸ್ಥಾನದ ಹಿರಿಯ ಪ್ರಾಥಮಿಕ ಶಾಲೆಯ ತರಗತಿಗಳು ನಡೆ ಯುತ್ತಿವೆ. ಇದರಿಂದ ಮಕ್ಕಳಿಗೆ ಯಾವುದೇ ರೀತಿಯ ಅನಾನುಕೂಲ ವಾಗಿಲ್ಲ. ಒಂದು ವೇಳೆ ಪ್ರೌಢ ಶಾಲೆ ಯನ್ನು ತೆರವುಗೊಳಿಸಿದ ಕಟ್ಟಡದಲ್ಲಿ ಪ್ರಾಥಮಿಕ ಶಾಲೆ ಆರಂಭಿಸಿದರೆ ಪ್ರಾಥಮಿಕ ಶಾಲೆಯ ತರಗತಿ ಕೋಣೆಗಳು ಖಾಲಿ ಉಳಿಯುತ್ತವೆ.

ಪಟ್ಟಣಕ್ಕೆ ಬರುವ ಪ್ರವಾಸಿಗರ ವಸತಿಗಾಗಿ ಯಾತ್ರಿ ನಿವಾಸ ಇರುವುದ ರಿಂದ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಯಾವುದೇ ರೀತಿಯ ತೊಂದರೆ ಯಾಗದು ಎಂದು ಸಂಗಮೇಶ ಕಾಳಹಸ್ತೇಶ್ವರಮಠ ಹೇಳುತ್ತಾರೆ.

ಈಗಿರುವ  ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯನ್ನು ಸ್ಥಳಾಂತರಗೊಳಿ ಸಬೇಕಾದ ಪರಿಸ್ಥಿತಿ  ಬಂದೊದಗಿದರೆ ವಿಜಯಪುರ ರಸ್ತೆಯಲ್ಲಿನ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿರುವ ಕೊಠಡಿಗಳಲ್ಲಿ ಶಾಲೆ ನಡೆಸಬೇಕಾಗುತ್ತದೆ. ಆದರೆ ಈ ಆವರಣದಲ್ಲಿ ಈಗಾಗಲೇ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್‌, ಸರ್ಕಾರಿ ಐಟಿಐ ಕಾಲೇಜುಗಳು ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಕಾರಣದಿಂದಾಗಿ ಮುಕ್ತವಾದ ಪಾಠ ಪ್ರವಚನಕ್ಕೆ ತೊಂದರೆಯಾಗಬಹುದು ಎಂಬ ಆತಂಕ ಕೆಲ ಪಾಲಕರದ್ದು.

ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತರಗತಿ ನಡೆಸಲು ಕೊಠಡಿಗಳಿದ್ದರೂ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ವಿದ್ಯಾರ್ಥಿನಿಯರಿಗೆ ಸಮರ್ಪಕವಾದ ಶೌಚಾಲಯ ವ್ಯವಸ್ಥೆ ಇಲ್ಲ. ಅಲ್ಲದೇ ಸಮರ್ಪಕ ಕುಡಿಯವ ನೀರಿನ ವ್ಯವಸ್ಥೆ ಇಲ್ಲ. ಈ ಹಿಂದೆ ಈ ಕಟ್ಟಡದಲ್ಲಿ ಅಧ್ಯಯನ ಮಾಡಿದ ಆರ್‌ಎಂಎಸ್‌ಎ ವಿದ್ಯಾರ್ಥಿನಿಯರು ಮೂತ್ರ ವಿಸರ್ಜನೆಗೆ ಹೋಗಬೇಕಾದರೆ ಸ್ಥಳ ಇಲ್ಲದೇ ತೊಂದರೆ ಅನುಭವಿಸಿದ್ದ ಪ್ರಸಂಗಗಳು ಈ ಹಿಂದೆ ನಡೆದಿವೆ.

ಒಂದು ವೇಳೆ ಪ್ರಾಧಿಕಾರವು ಬಾಲಕಿಯರ ಪ್ರೌಢ ಶಾಲೆಯ ಕಟ್ಟಡ ತೆರವುಗೊಳಿಸಬೇಕೆಂದು ನಿರ್ಧರಿಸಿದ್ದರೆ. ಪ್ರೌಢ ಶಾಲೆಯ ಕಟ್ಟಡ ಮುಂಭಾಗದಲ್ಲಿನ ಅಕ್ಕನಾಗಮ್ಮ ಪದವಿ ಪೂರ್ವ ಕಾಲೇಜಿನ ಸಮಯವನ್ನು ಬೆಳಗಿನ ಅವಧಿಗೆ ನಿಗದಿ ಪಡಿಸಿ. ಬೆಳಿಗ್ಗೆ 11–30 ರಿಂದ ಪ್ರೌಢ ಶಾಲೆ ನಡೆಯು ವಂತೆ ವ್ಯವಸ್ಥೆ ಕಲ್ಪಿಸುವ ಮೂಲಕ ವಿದ್ಯಾರ್ಥಿನಿಯರಿಗೆ ಅನುಕೂಲ ಕಲ್ಪಿಸಬೇಕು ಎಂದು ವಿದ್ಯಾರ್ಥಿನಿ ಪಾಲಕರಾದ ಎಂ.ಎಸ್‌.ವಂದಾಲ, ಯರನಾಳ ಗ್ರಾಮದ ರಾಚಪ್ಪ ಬೀಳಗಿ ಸೇರಿದಂತೆ  ಇತರರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.