ಮುದ್ದೇಬಿಹಾಳ: ತಾಲ್ಲೂಕಿನ ಕೋಳೂರ ಗ್ರಾಮದ ಬಳಿ ರಾಜಕೀಯ ವೈಷಮ್ಯ ಹಿನ್ನೆಲೆ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ 13 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮೃತ ಬಸವರಾಜ ವಾಲೀಕಾರನ ಪತ್ನಿ ಪ್ರೇಮಾ ದೂರು ದಾಖಲಿಸಿದ್ದಾರೆ.
ಸಿದ್ದನಗೌಡ ಪಾಟೀಲ, ಮಹಾಂತ ಗೌಡ ಪಾಟೀಲ, ಅನಿಲಕುಮಾರ ಕತ್ತಿ, ವಿರೂಪಾಕ್ಷಪ್ಪ ಕತ್ತಿ, ರಾಮಣ್ಣ ಮಡಿ ವಾಳರ, ಶಂಕರಗೌಡ ಬೆಳಗಲ್ಲ, ಬಸವ ರಾಜ ಮಡಿವಾಳರ, ನೀಲಪ್ಪ ಢವಳಗಿ, ಶೇಕಪ್ಪ ಕತ್ತಿ, ಬಸವರಾಜ ಇಂಗಳಗಿ, ಮಲ್ಲಪ್ಪ ಬಿದರಕುಂದಿ, ಬಸವರಾಜ ಮಾಲಗಾವಿ ಆರೋಪಿಗಳಾಗಿದ್ದು, ಗುರಪ್ಪ ತಾರನಾಳ ಅವರಿಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸ ಲಾಗಿದೆ. ಆದರೆ ಯಾರನ್ನೂ ಇದುವ ರೆಗೂ ಬಂಧಿಸಿಲ್ಲ ಎಂದು ಪಿಎಸ್ಐ ಗೋವಿಂದ ಗೌಡ ಪಾಟೀಲ ತಿಳಿಸಿದ್ದಾರೆ.
ಸದ್ಯ ಕೋಳೂರಲ್ಲಿ ಗಾಢ ಮೌನ ಆವರಿಸಿದೆ. ಪುರುಷರು, ಮಹಿಳೆಯರು, ಮಕ್ಕಳು ಮನೆ ಬಿಟ್ಟು ಹೊರಗೆ ಬರಲು ಆತಂಕ ಪಡುವಂತಾಗಿದೆ. ಸ್ಥಳದಲ್ಲಿ ಪೊಲೀಸರ ಡಿಆರ್ ತುಕಡಿ ಭದ್ರತೆಗೆ ನಿಯೋಜಿಸಲಾಗಿದೆ. ಅತ್ತ ಗಾಯಾಳು ನಿಂಗಪ್ಪ ಪರಪ್ಪ ಹರನಾಳ ಇನ್ನೂ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಗೆ ಜಾತಿ ಬಣ್ಣ ಅಂಟಿ ಕೊಂಡಿದ್ದು ತನ್ನ ಪತಿಯನ್ನು ಮೇಲ್ಜಾತಿ ಯವರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಮೃತ ಬಸವರಾಜ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆ ಜಿಲ್ಲೆ ಜಮ ಖಂಡಿ ಘಟಕದಲ್ಲಿ ಚಾಲಕ ಕಂ ನಿರ್ವಾ ಹಕರಾಗಿದ್ದು ವರ್ಷದ ಹಿಂದೆ ಸೇವೆ ಯಿಂದ ಅಮಾನತು ಆಗಿದ್ದ. ಊರಿಗೆ ಬಂದ ಮೇಲೆ ಯಾರ ಉಸಾಬರಿಗೂ ಹೋಗದೆ ಕೂಲಿನಾಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಎಂದು ಪ್ರೇಮಾ ದೂರಿನಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.