ನಿಡಗುಂದಿ: ಗ್ರಾಮಕ್ಕೆ ಮೂಲಸೌಲಭ್ಯ ಗಳನ್ನು ಒದಗಿಸಿಲ್ಲ ಎಂದು ಆಕ್ರೋಶ ಗೊಂಡಿರುವ ಸಮೀಪದ ಉಣ್ಣಿಬಾವಿ ಗ್ರಾಮಸ್ಥರು, ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
‘ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗದಿಂದ ರಾಷ್ಟ್ರೀಯ ಹೆದ್ದಾರಿ-50ಕ್ಕೆ ಸಂಪರ್ಕಿ ಸುವ ರಸ್ತೆಯೇ ಹದಗೆಟ್ಟು ಹೋಗಿದೆ. ಎಲ್ಲೆಂದರಲ್ಲಿ ತಗ್ಗುದಿನ್ನೆಗಳು ಕಾಣಿಸಿ ಕೊಂಡು ವಾಹನ ಸವಾರರು ಕಷ್ಟ ಪಡುತ್ತಿದ್ದಾರೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಉಪಾಧ್ಯಕ್ಷ ಸತೀಶ ನರಸರೆಡ್ಡಿ, ನಾಗಭೂಷನ್ ನರಸರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ನಿತ್ಯ ಬಸವನ ಬಾಗೇವಾಡಿಯಿಂದ ನಿಡಗುಂದಿಗೆ ಹೋಗುವ ಬಸ್ ಕೂಡ ಇದೇ ಮಾರ್ಗದಿಂದ ಸಂಚರಿಸುತ್ತದೆ. ಮಳೆಗಾಲ ಬಂತೆಂದರೆ ಸಾಕು. ವಾಹನ ಹಾಯ್ದು ಹೋಗುವಾಗ ಪಕ್ಕದಲ್ಲಿ ಸಂಚರಿಸುವ ಪಾದಚಾರಿಗಳಿಗೆ ಕಲುಷಿತ ನೀರಿನ ಅಭಿಷೇಕವೇ ನಡೆದು ಹೋಗುತ್ತದೆ’ ಎಂದೂ ದೂರಿದರು.
‘ಮೇ 12ರಂದು ಜರುಗುವ ವಿಧಾನಸಭಾ ಚುನಾವಣೆ ಒಳಗಾಗಿ ಈ ರಸ್ತೆ ದುರಸ್ತಿ, ಮೂಲಸೌಲಭ್ಯಗಳ ಕೊರತೆ ನೀಗಿಸದಿದ್ದರೆ ಯಾವುದೇ ಪಕ್ಷದವರನ್ನೂ ಊರೊಳಗೆ ಪ್ರಚಾರ ಮಾಡಲೂ ಸಹ ಪ್ರವೇಶ ನೀಡುವುದಿಲ್ಲ’ ಎಂದು ಗ್ರಾಮಸ್ಥರಾದ ಎಚ್.ಎಚ್.ಪಟೇಲ, ಸಂತೋಷ ಕೋನರೆಡ್ಡಿ, ರಾಜಹ್ಮದ ಹುಲ್ಲೂರ, ಆನಂದ ಬಿರಾದಾರ, ಭೀಮನಗೌಡ ಕೋನರೆಡ್ಡಿ,ಹನುಮಂತ ಹೂಗಾರ ಮತ್ತಿತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
**
ಹದಗೆಟ್ಟ ರಸ್ತೆ, ಮೂಲಭೂತ ಸೌಲಭ್ಯಗಳ ಕೊರತೆ & ಉಣ್ಣಿಭಾವಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.