ADVERTISEMENT

ಪಾಲಿಕೆಗೆ ಸುಸಜ್ಜಿತ ಕಟ್ಟಡ;ಕನಸು ನನಸು

ಹೊಸ ಕಟ್ಟಡ ನಿರೀಕ್ಷೆ ಹೊಸ ಹುರುಪು

ಡಿ.ಬಿ, ನಾಗರಾಜ
Published 20 ಜನವರಿ 2017, 8:59 IST
Last Updated 20 ಜನವರಿ 2017, 8:59 IST
ಪ್ರಸ್ತುತ ಕಲ್ಯಾಣ ಮಂಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಪಾಲಿಕೆ ಕಚೇರಿ
ಪ್ರಸ್ತುತ ಕಲ್ಯಾಣ ಮಂಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಾಲಿಕೆ ಕಚೇರಿ   

ವಿಜಯಪುರ: ಇಲ್ಲಿನ ನಗರಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿ ಮೂರು ವರ್ಷ ಗತಿಸಿದರೂ, ಸುಸಜ್ಜಿತ ಆಡಳಿತಾತ್ಮಕ ಕಚೇರಿ ಎಂಬುದು ಕನಸಾಗಿತ್ತು. ಇಂದಿಗೂ ಕಲ್ಯಾಣ ಮಂಟಪದಲ್ಲೇ ಕಾರ್ಯ ನಿರ್ವಹಿಸುತ್ತಿದೆ.

ಬೆಂಗಳೂರಿನಲ್ಲಿ ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ₹14.51 ಕೋಟಿ ವೆಚ್ಚದಲ್ಲಿ ವಿಜಯಪುರ ಮಹಾನಗರ ಪಾಲಿಕೆಯ ಆಡಳಿತಾತ್ಮಕ ಕಚೇರಿ ಸ್ಥಾಪನೆಗೆ ಅನುಮೋದನೆ ದೊರೆತಿರುವುದು ಜನರ ಸಂತಸವನ್ನು ನೂರ್ಮಡಿಗೊಳಿಸಿದೆ.

ನಗರಸಭೆಯಿದ್ದ ಸಂದರ್ಭವೇ ಸುಸಜ್ಜಿತ ಭವ್ಯ ಕಟ್ಟಡ ನಿರ್ಮಾಣಕ್ಕಾಗಿ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಿದ್ದ ಸಂದರ್ಭ ಕಲಬುರ್ಗಿಯಲ್ಲಿ ನಡೆಸಿದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಈ ಭಾಗಕ್ಕೆ ಕೊಡುಗೆಯಾಗಿ ವಿಜಯಪುರ ನಗರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ ಹಣ ಬಿಡುಗಡೆಗೊಳಿಸಿದ್ದರು.

ಈ ಹಣ ಮಂಜೂರಾಗಿ ಆರೇಳು ವರ್ಷ ಗತಿಸಿದರೂ ಕಟ್ಟಡ ನಿರ್ಮಾಣದ ಪ್ರಸ್ತಾವನೆಗೆ ಅನುಮೋದನೆಯೇ ಸಿಕ್ಕಿರಲಿಲ್ಲ. ಸ್ಥಳದ ಕುರಿತಂತೆ ಗ್ರಂಥಾಲಯ ಇಲಾಖೆ ಜತೆಗಿನ ಜಟಾಪಟಿಯಲ್ಲೇ ಸಮಯ ವ್ಯರ್ಥವಾಯಿತು. ಈ ನಡುವೆ ನಗರಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿತು. ಹರ್ಷಶೆಟ್ಟಿ ಪಾಲಿಕೆಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸೂಚನೆಯಂತೆ ಸೂಕ್ತ ಪ್ರಸ್ತಾವನೆ, ನೂತನ ನೀಲನಕ್ಷೆ ಸಿದ್ಧಪಡಿಸಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿಕೊಟ್ಟಿದ್ದರು.

­ಕಟ್ಟಡ ಸುಸಜ್ಜಿತವಾಗಿರಲಿ: ಪಾಲಿಕೆಯ ನೂತನ ಕಟ್ಟಡ ಬಹು ದಶಕಗಳ ಕಾಲ ಸುಸಜ್ಜಿತವಾಗಿರಬೇಕು. ಕಳಪೆ ಕಾಮಗಾರಿಗೆ ಅವಕಾಶವಿರಬಾರದು. ಈಗ ನನೆಗುದಿಗೆ ಬಿದ್ದಿರುವ ಮಾಸ್ಟರ್‌ಪ್ಲ್ಯಾನ್‌ ಕಾಮಗಾರಿಗಳಂತೆ ಕಟ್ಟಡ ನಿರ್ಮಾಣ ಕಾಮಗಾರಿಯೂ ನಡೆಯಬಾರದು  ಪಾಲಿಕೆಯ ಮೂರ್ನಾಲ್ಕು ಹಿರಿಯ ಸದಸ್ಯರು ನೂತನ ಕಟ್ಟಡ ನಿರ್ಮಾಣದ ರೂಪುರೇಷೆ ಬಗ್ಗೆ ತಮ್ಮ ಅನಿಸಿಕೆಗಳನ್ನು ‘ಪ್ರಜಾವಾಣಿ’ ಬಳಿ ವ್ಯಕ್ತಪಡಿಸಿದರು.

ತುಂಡು ಗುತ್ತಿಗೆಗೆ ಒತ್ತಾಯ
ವಿಜಯಪುರ ನಗರ ಶಾಸಕ ಡಾ.ಮಕ್ಬೂಲ್ ಬಾಗವಾನ ಪ್ರಮುಖ ಬೆಂಬಲಿಗ ಗುತ್ತಿಗೆದಾರರು ಸಚಿವ ಸಂಪುಟದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ದೊರಕುತ್ತಿದ್ದಂತೆ, ಸಿಂಗಲ್‌ ಟೆಂಡರ್ ಆಹ್ವಾನಿಸದೆ, ತುಂಡು ಗುತ್ತಿಗೆ ಸ್ವರೂಪದಲ್ಲಿ ಕಾಮಗಾರಿ ನಿರ್ವಹಣೆ ಗುತ್ತಿಗೆ ನೀಡಬೇಕು ಎಂದು ಪಾಲಿಕೆ ಆಯುಕ್ತರ ಮೇಲೆ ಅತೀವ ಒತ್ತಡ ಹಾಕುತ್ತಿದ್ದಾರೆ ಎಂಬುದನ್ನು ಪಾಲಿಕೆಯ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಇದಕ್ಕೆ ಮೇಯರ್‌ ಸಮ್ಮತಿಯೂ ಇದೆ ಎನ್ನಲಾಗಿದೆ.  ಆಯುಕ್ತರು ಸಹ ತಮ್ಮ ಒಡ್ಡೋಲಗದ ಗುತ್ತಿಗೆದಾರರಿಗೆ ಈ ಕಾಮಗಾರಿಯ ಟೆಂಡರ್‌ ನೀಡದೆ, ಪಾರದರ್ಶಕವಾಗಿ ನಿರ್ವಹಿಸುವರಿಗೆ ಟೆಂಡರ್ ನೀಡಬೇಕು ಎಂಬ ಒತ್ತಾಯವಿದೆ.

ADVERTISEMENT

ಸಚಿವ ಪಾಟೀಲ ಪ್ರಯತ್ನಸಚಿವ ಎಂ.ಬಿ.ಪಾಟೀಲ ಕಡತದ ಬೆನ್ನು ಹತ್ತಿ ಸಚಿವ ಸಂಪುಟದ ಸಭೆಯಲ್ಲಿ ಮಂಡನೆಯಾಗುವಂತೆ ನೋಡಿಕೊಂಡು, ಅದಕ್ಕೆ ಒಪ್ಪಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಹಾನಗರ ಪಾಲಿಕೆ ಮೂಲಗಳು ಮಾಹಿತಿ ನೀಡಿವೆ.

ಅನುದಾನ ಎಲ್ಲೆಲ್ಲಿಂದ ?
* ₹8   ಕಲಬುರ್ಗಿ ಸಚಿವ ಸಂಪುಟ ಸಭೆಯಲ್ಲಿ ದೊರೆತ ಹಣ
* ₹6 ನಗರೋತ್ಥಾನ 3ನೇ ಹಂತದಲ್ಲಿ ಬಂದ ಹಣ
* ₹51 ಪಾಲಿಕೆ ಸಾಮಾನ್ಯ ನಿಧಿಯಿಂದ ಬಳಸಲಾಗುವ ಹಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.