ADVERTISEMENT

ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಹಾಸ್ಯಾಸ್ಪದ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 5:49 IST
Last Updated 23 ಸೆಪ್ಟೆಂಬರ್ 2017, 5:49 IST

ವಿಜಯಪುರ: ‘ಜಿಲ್ಲೆಯ ಯಾವುದೇ ಮತಕ್ಷೇತ್ರದಿಂದ ಬಿ.ಎಸ್‌.ಯಡಿಯೂರಪ್ಪ ಸ್ಪರ್ಧಿಸಿದರೆ 50 ಸಾವಿರ ಮತಗಳಿಂದ ಗೆಲ್ಲಿಸುತ್ತೇನೆ ಎಂದಿರುವ ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಹಾಸ್ಯಾಸ್ಪದವಾಗಿದೆ’ ಎಂದು ಬಿಜೆಪಿ ಮುಖಂಡ ಭೀಮಾಶಂಕರ ಹದನೂರ ತಿಳಿಸಿದ್ದಾರೆ.

‘ಜಿಲ್ಲೆಯಿಂದ ಬಿ.ಎಸ್‌.ವೈ ಸ್ಪರ್ಧಿಸಿದರೆ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವ ಶಕ್ತಿ ಬಿಜೆಪಿ ಕಾರ್ಯಕರ್ತರು, ನಾಯಕರಲ್ಲಿದೆ. ಆದರೆ ತಾವೇ ಎರಡು ಬಾರಿ ಸೋತಿರುವ ಯತ್ನಾಳರಿಗೆ ಬಿ.ಎಸ್‌.ವೈ ಗೆಲ್ಲಿಸುವ ಯಾವುದೇ ಅರ್ಹತೆಯಿಲ್ಲ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.

‘ಯತ್ನಾಳ ಬಿಜೆಪಿ ಸೇರ್ಪಡೆಗೆ ಕೇಂದ್ರ ಸಚಿವ ರಮೇಶ ಜಿಗಜಿಣಗಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ ಎಂದೂ ವಿರೋಧಿಸಿಲ್ಲ. ಪಕ್ಷದಲ್ಲಿ ಇವರ ವರ್ತನೆ, ನಡವಳಿಕೆ ಗಮನಿಸಿ ಎರಡು ಬಾರಿ ಉಚ್ಛಾಟಿಸಲಾಗಿದೆ.

ADVERTISEMENT

ಪದೇ ಪದೇ ನಮ್ಮ ನಾಯಕರ, ಪಕ್ಷದ ಬಗ್ಗೆ ಸಲ್ಲದ ಹೇಳಿಕೆ ನೀಡುವುದು ಸಮಂಜಸವಲ್ಲ. ಬಿಜೆಪಿ ಬಲಾಢ್ಯವಾಗಿದ್ದು, ಯಾವುದೇ ವ್ಯಕ್ತಿಗೆ ಅವಲಂಬಿತವಾಗಿಲ್ಲ. ನಾಯಕರನ್ನು ಸಂದರ್ಭಕ್ಕೆ ತಕ್ಕಂತೆ ತೆಗಳುವುದು– ಹೊಗಳುವುದು ಸೂಕ್ತವಲ್ಲ’ ಎಂದು ಹದನೂರ ಯತ್ನಾಳ ನಡವಳಿಕೆಯನ್ನು ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.