ತಾಳಿಕೋಟೆ: ಅಬ್ಬರದ ಆರಂಭ ಕಂಡ ಮುಂಗಾರು ನಂತರದಲ್ಲಿ ಕ್ಷೀಣಿಸಿ ರೈತರು ಬಾಯಿಬಾಯಿ ಬಿಡುವಂತಾಗಿದ್ದು ಮಳೆರಾಯನ ಕೃಪೆಗಾಗಿ ಪಟ್ಟಣದ ರೈತರು ಗುರುವಾರ ಪಟ್ಟಣದ ಎಲ್ಲ ದೇವಸ್ಥಾನಗಳಿಗೆ ತೆರಳಿ ನೀರೆರೆದು ಭಕ್ತಿಯ ಮಹಾ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.
ಕಳೆದ ನಾಲ್ಕೈದು ವರ್ಷಗಳಿಂದ ಮಳೆಯ ಅಭಾವ ತೋರಿ ಬರಗಾಲದ ಬವಣೆಯಲ್ಲಿ ರೈತರು ಬಾಡಿ ಹೋಗುತ್ತಿದ್ದಾರೆ. ತಮ್ಮ ಬವಣೆ ತಪ್ಪಿಸಿ ಕೃಪೆದೊರಲೆಂದು ಗುರುವಾರ ನಸುಕಿನ ಜಾವ 5 ಕಿ.ಮೀ. ದೂರದ ಸಿಡಿಲ್ ಭಾವಿಗೆ ಬಾಜಾ ಭಜಂತ್ರಿಯೊಂದಿಗೆ ತೆರಳಿದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಎಲ್ಲ ಕೋಮಿನ ಜನರು ಮೆರವಣಿಗೆಯೊಂದಿಗೆ ಪಂಚ ಶಹೀದ್ ದರ್ಗಾಕ್ಕೆ ಬಂದು ಅಲ್ಲಿ ಮಹಾಪೂಜೆ ಸಲ್ಲಿಸಿದರು.
ಅಲ್ಲಿಂದ ಗ್ರಾಮದೇವತೆ, ಶಿವಭವಾನಿ ಮಂದಿರ, ಅಂಬಾಭವಾನಿ ಮಂದಿರ, ಖಾಸ್ಗತೇಶ್ವರ ಮಠ, ಹನುಮಾನ ಮಂದಿರ, ಮರಗಮ್ಮ ದೇವಸ್ಥಾನ, ದುರ್ಗಮ್ಮ ದೇವಸ್ಥಾನ, ಬಸವೇಶ್ವರ ದೇವಸ್ಥಾನಗಳಿಗೆ ತೆರಳಿ ನೀರೆರೆದು ಮಹಾ ಪೂಜೆ ಸಲ್ಲಿಸಿದರು. ಸಂಜೆ ಐದು ಕುದುರೆಗಳನ್ನು ವಿವಿಧ ವಾದ್ಯ ವೈಭವಗಳೊಂದಿಗೆ ಪಂಚಶ ಹೀದ್ ಕೆರೆಯಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.