ಸಿಂದಗಿ: ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ, ಭಾರತ ವಿದ್ಯಾರ್ಥಿ ಫೆಡರೇಶನ್ ಸಂಘಟನೆಗಳ ನೇತೃತ್ವದಲ್ಲಿ ನಗರದ ಶಾಲಾ–ಕಾಲೇಜುಗಳ ವಿದ್ಯಾರ್ಥಿನಿಯರು ಶುಕ್ರವಾರ ತರಗತಿ ಬಹಿಷ್ಕರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನೂರಾರು ವಿದ್ಯಾರ್ಥಿನಿಯರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದಲಿತ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಕೊಡಿ ಎಂದು ಘೊಷಣೆ ಕೂಗಿದರು.ನಂತರ ಮಿನಿವಿಧಾನಸೌಧ ಎದುರು ಧರಣಿ ಸತ್ಯಾಗ್ರಹ ನಡೆಸಿದರು. ಈ ಸಂದರ್ಭದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ ಜಿಲ್ಲಾ ಸಂಚಾಲಕ ಮಹೇಶ ರಾಠೋಡ, ಲಕ್ಷ್ಮಿ ಮಠ, ಶೃತಿ ಬಿರಾದಾರ ಮಾತನಾಡಿ, ‘ಅಮಾನುಷ ಕೃತ್ಯದ ಹೊಣೆ ಪೋಲಿಸ್ ಇಲಾಖೆ, ರಾಜ್ಯ ಸರ್ಕಾರ ಹೊರಬೇಕು. ಆರೋಪಿಗಳು ಗಾಂಜಾ ನಶೆಯಲ್ಲಿ ಈ ಹೇಯ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಗಾಂಜಾ, ಅಫೀಮು ಮಾರಾಟ ರಾಜಾರೋಷವಾಗಿ ನಡೆದಿದೆ. ಹೀಗಾಗಿ ಪೋಲಿಸ್ ವೈಫಲ್ಯ ಮೇಲ್ನೋಟಕ್ಕೆ ಸಾಬೀತಾಗುತ್ತದೆ’ ಎಂದು ದೂರಿದರು.
ಪ್ರತಿಭಟನಾಕಾರರು ಪ್ರಭಾರಿ ತಹಶೀಲ್ದಾರ್ ವಿಜಯಕುಮಾರ ಕಡಕಬಾವಿ ಅವರಿಗೆ ಮನವಿ ಸಲ್ಲಿಸಿದರು.
ಪದಾಧಿಕಾರಿಗಳಾದ ಸಂಗೂ ನಾಲ್ಕಮಾನ, ಆದಮ ಜಮಾದಾರ. ಶರಣಪ್ಪ ಹರಿಜನ, ಸಾಯಿ ಪಟೇಲ, ಬಸೀರಅಹ್ಮದ ತಾಂಬೆ, ಎಸ್.ಎಂ.ನಾಯ್ಕೋಡಿ, ಚಂದ್ರಿಕಾ, ಸವಿತಾ ಉಪ್ಪಾರ, ಶಾಂತಾ ಹರಿಜನ, ಪ್ರಿಯಾಂಕಾ ವಸ್ತ್ರದ, ಶಿವಲೀಲಾ ಕರಿಗೌಡ, ದಾನಮ್ಮ, ಕಾವೇರಿ, ಲಕ್ಷ್ಮೀ ಹಂಗರಗಿ, ಭಾಗಣ್ಣ ಬೀರಗೊಂಡ, ಮಾಳಪ್ಪ ಹೆಳವಾರ, ಆತೀಫ್ ನದಾಫ್ ಮುಂತಾದವರು ಪ್ರತಿಭಟನೆ ನೇತೃತ್ವ ವಹಿಸಿಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.