ಮುದ್ದೇಬಿಹಾಳ: ಪಟ್ಟಣದ ವ್ಯಾಪ್ತಿಯಲ್ಲಿ ಹಂದಿಗಳು ನಿಗೂಢವಾಗಿ ಸಾಯುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ವ್ಯಕ್ತವಾಗಿದೆ. ಈಚೆಗಿನ ದಿನಗಳಲ್ಲಿ ಹಂದಿಗಳ ಹಾವಳಿ ಹೆಚ್ಚಿದೆ. ಇದರ ನಡುವೆಯೇ ಮಹಾಂತೇಶ ನಗರ, ಬಸವನಗರ, ಪಿಲೇಕೆಮ್ಮ ನಗರ, ಇಂದಿರಾ ನಗರ, ನೇತಾಜಿ ನಗರ, ಸಂಗಮೇಶ್ವರ ನಗರ, ಗಣೇಶ ನಗರ, ವಿದ್ಯಾನಗರ ಸೇರಿದಂತೆ ಹಲ ಬಡಾವಣೆಗಳಲ್ಲಿ ನಿಗೂಢವಾಗಿ ಹಂದಿಗಳು ಮೃತಪಡುತ್ತಿರುವುದು ಪಟ್ಟಣಿಗರ ಆತಂಕ ಹೆಚ್ಚಿಸಿದೆ.
15 ದಿನದ ಅವಧಿಯಲ್ಲಿ 200ಕ್ಕೂ ಹೆಚ್ಚು ಹಂದಿ ಸತ್ತಿವೆ. ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಎರಡ್ಮೂರು ದಿನದ ಅವಧಿಯಲ್ಲೇ 20ಕ್ಕೂ ಹೆಚ್ಚು ಹಂದಿ ಪಟ್ಟಣದ ವಿವಿಧೆಡೆ ಸತ್ತಿದ್ದು, ಪುರಸಭೆ ಆಡಳಿತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.
ಪಶು ವೈದ್ಯರ ಸಲಹೆ ಮೇರೆಗೆ ಪುರಸಭೆ ಮುಖ್ಯಾಧಿಕಾರಿ ಹಂದಿಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಹಂದಿಗಳನ್ನು ಊರಿಂದ ಆಚೆಗೆ ರವಾನಿಸಬೇಕು. ಇಲ್ಲದಿದ್ದರೇ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಹಂದಿ ಮಾಲೀಕರು ಕಿಂಚಿತ್ ಪ್ರತಿಕ್ರಿಯಿಸದಿರುವುದರಿಂದ ಸಮಸ್ಯೆ ಉಲ್ಭಣಿಸಿದೆ ಎಂಬ ದೂರು ವ್ಯಾಪಕವಾಗಿ ಸಾರ್ವಜನಿಕರಿಂದ ಕೇಳಿ ಬಂದಿದೆ.
‘ಪಶು ವೈದ್ಯರು ಸ್ವಯಂ ಪ್ರೇರಿತರಾಗಿ ಮೃತಪಟ್ಟ ಕೆಲ ಹಂದಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಪ್ರಯೋಗಾಲಯಕ್ಕೆ ಕೆಲ ಸ್ಯಾಂಪಲ್ ಕಳುಹಿಸಿದ್ದಾರೆ. ನ್ಯೂಮೇನಿಯಾ ಇನ್ಫೆಕ್ಷನ್ ಕಾರಣದಿಂದ ಹಂದಿಗಳು ಸಾಯುತ್ತಿವೆ ಎಂಬುದು ಪ್ರಾಥಮಿಕ ವರದಿಯನ್ವಯ ಪತ್ತೆಯಾಗಿದೆ.
ಇದು ಅಪಾಯಕಾರಿಯಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ. ಪ್ರಯೋಗಾಲಯದ ವರದಿ ಬಂದ ಮೇಲೆ ನಿಖರ ಕಾರಣ ತಿಳಿಯಲಿದೆ. ಪಶುವೈದ್ಯರ ತಂಡ ಹಂದಿ ಮಾಲೀಕರಿಗೆ ಸೂಕ್ತ ಔಷಧೋಪಚಾರಕ್ಕೆ ಸಲಹೆಯನ್ನು ನೀಡಿದ್ದಾರೆ’ ಎಂದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಸ್.ಸಿ.ಚೌಧರಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.