ADVERTISEMENT

‘ನಾಡಿನ ಅಖಂಡತೆಗೆ ಕುವೆಂಪು ಕೊಡುಗೆ ಅಪಾರ’

ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ, ವಿಶ್ವ ಮಾನವ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 12:50 IST
Last Updated 1 ಜನವರಿ 2018, 12:50 IST

ವಿಜಯಪುರ: ‘ಕನ್ನಡ ನಾಡಿನ ಅಖಂಡತೆ, ಸಾರ್ವಭೌಮತ್ವಕ್ಕೆ ರಾಷ್ಟ್ರಕವಿ ಕುವೆಂಪು ನೀಡಿರುವ ಕೊಡುಗೆ ಅಪಾರ’ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ನಾಗಠಾಣ ಶಾಸಕ ಪ್ರೊ.ರಾಜು ಆಲಗೂರ ತಿಳಿಸಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ, ವಿಶ್ವ ಮಾನವ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ‘ಕುವೆಂಪು ಯುಗದ ಕವಿ, ಜಗದ ಕವಿ, ಕನ್ನಡದ ಮಹಾನ್ ಲೇಖಕ, ಕನ್ನಡ ಸಾಹಿತ್ಯದಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದವರು’ ಎಂದು ಸ್ಮರಿಸಿದರು.

‘ಸ್ವಸ್ಥ ಸಮಾಜ, ರಾಷ್ಟ್ರ ನಿರ್ಮಾಣಕ್ಕಾಗಿ ವಿಶ್ವ ಮಾನವ ಚಿಂತನೆಗಳನ್ನು ಪಸರಿಸಿದ ಕುವೆಂಪು ಪ್ರಾಧ್ಯಾಪಕರಾಗಿ, ಸಾಹಿತಿಗಳಾಗಿ, ದೇಶಪ್ರೇಮಿಗಳಾಗಿ ಅನೇಕ ಬರಹಗಳ ಮೂಲಕ ಕನ್ನಡ ನಾಡಿನಲ್ಲಿ ಚಿರಸ್ಮರಣೀಯರಾಗಿ ಉಳಿದಿದ್ದಾರೆ. ವಿಶ್ವಜ್ಯೋತಿ ಬಸವಣ್ಣ, ಜ್ಯೋತಿಬಾ ಫುಲೆಯಂತೆ ಸಮಾನತೆಗಾಗಿ ಹೆಚ್ಚಿನ ಮಹತ್ವವನ್ನು ಅವರ ಸಾಹಿತ್ಯದ ಮೂಲಕ ಈ ಸಮಾಜಕ್ಕೆ, ರಾಜ್ಯಕ್ಕೆ, ರಾಷ್ಟ್ರಕ್ಕೆ ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.

ADVERTISEMENT

ಸಾಹಿತಿ ಪರಶುರಾಮ ಶಿವಶರಣ ಮಾತನಾಡಿ ‘ಕರ್ನಾಟಕ ಅನ್ನುವ ಹೆಸರಿಗೆ ಸರಿ ಸಮಾನವಾದ, ಪ್ರಸಿದ್ಧವಾದ ನಾಡಿನ ಕೆಲವೇ ಹೆಸರುಗಳಲ್ಲಿ ಕುವೆಂಪು ಹೆಸರು ಅಜರಾಮರ. ಕುವೆಂಪು ವೈಚಾರಿಕತೆ, ಆಧ್ಯಾತ್ಮ, ತತ್ವಜ್ಞಾನ, ಕ್ರಾಂತಿ ಎಲ್ಲದರ ಮಿಶ್ರಣದಂತಿದ್ದರು. ಶಿಸ್ತಿನ ವ್ಯಕ್ತಿಯಾಗಿದ್ದರು. ಕನ್ನಡಿಗರ ಮನದಲ್ಲಿ ನೆಲೆಸಿರುವ ಮಹಾಕವಿ ಎಂದು ಬಣ್ಣಿಸಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಸುಂದರೇಶಬಾಬು, ಉಪ ವಿಭಾಗಾಧಿಕಾರಿ ಶಂಕರ ವಣಕ್ಯಾಳ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಪ್ರಸನ್ನಕುಮಾರ, ತಹಶೀಲ್ದಾರ್‌ ಎಂ.ಎನ್.ಬಳಿಗಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.