ವಿಜಯಪುರ: ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಪಟ್ಟಂತೆ, ವಿವಿಧ ರಾಜಕೀಯ ಪಕ್ಷಗಳ ಮೂಲಕ ಆಗುವ ಪ್ರಚಾರ ವೆಚ್ಚಗಳ ಮೇಲೆ ನಿಗಾ ಇಡಲು ವಿವಿಧ ಸಾಮಗ್ರಿಗಳ ದರ ನಿಗದಿಪಡಿಸಲು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಅಧ್ಯಕ್ಷತೆಯಲ್ಲಿ ಪೂರ್ವಭಾವಿಯಾಗಿ ಗುರುವಾರ ಸಭೆ ನಡೆಯಿತು.
ವಿವಿಧ ರಾಜಕೀಯ ಪಕ್ಷಗಳು, ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಚುನಾವಣಾ ಆಯೋಗದ ನಿರ್ದೇಶನದಂತೆ, ವಿವಿಧ ಪ್ರಚಾರ ವೆಚ್ಚಗಳ ಮೇಲೆ ನಿಗಾ ಇಡಲಾಗುತ್ತದೆ. ವಿವಿಧ ಸಾಮಗ್ರಿಗಳ ಪ್ರಸಕ್ತ ದರ ಪರಿಶೀಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕೂಡ ಈ ಕುರಿತು ಸೂಕ್ತ ಗಮನ ಹರಿಸುವಂತೆ ಸಲಹೆ ನೀಡಿದರು.
ವಿವಿಧ ರಾಜಕೀಯ ಪಕ್ಷಗಳ ಮೂಲಕ ಬಳಸಲಾಗುವ ವಾಹನಗಳ ಬಾಡಿಗೆ ದರ, ದ್ವಿಚಕ್ರ ವಾಹನಗಳ ಬಾಡಿಗೆ ದರ, ಶಾಮಿಯಾನಾ ಮತ್ತು ಅದಕ್ಕೆ ಸಂಬಂಧಪಟ್ಟ ಸಾಮಗ್ರಿಗಳ ದರಗಳನ್ವಯ ಸೂಕ್ತ ಮಾಹಿತಿ, ವಿವಿಧ ಪ್ರಚಾರ ಸಾಮಗ್ರಿಗಳ ಬಳಕೆ, ವಿವಿಧ ಹೋಟೆಲ್ಗಳ ಕೊಠಡಿ ಬಾಡಿಗೆ ದರ, ವಿವಿಧ ಸಾಮಗ್ರಿಗಳ ಸರಬರಾಜು, ಮುದ್ರಣ ಸಾಮಗ್ರಿಗಳ ದರ, ವಿವಿಧ ಪತ್ರಿಕೆಗಳ ಜಾಹೀರಾತು ದರ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪರಿಶೀಲಿಸಿದ ಅವರು, ಕಾಲಕಾಲಕ್ಕೆ ಈ ಕುರಿತು ಸಭೆ ನಡೆಸಿ ಪರಿಶೀಲಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಬಿ.ಬೂದೆಪ್ಪ, ಲೋಕೋಪಯೋಗಿ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು, ಇತರೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.