ಯಳಂದೂರು: ತಾಲ್ಲೂಕಿನ ಹೊನ್ನೂರು ಗ್ರಾಮದಲ್ಲಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ರಾತ್ರಿ ಕಾವಲುಗಾರರಿಲ್ಲದೆ ಮಕ್ಕಳು ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿ 75 ವಿದ್ಯಾರ್ಥಿಗಳಿದ್ದಾರೆ. ನಿಲಯ ಪಾಲಕ, ನಾಲ್ಕು ಜನ ಅಡುಗೆ ಸಿಬ್ಬಂದಿ ಸೇರಿ ಐವರು ನೌಕರರಿದ್ದಾರೆ. ರಾತ್ರಿ ಯಾರೂ ವಿದ್ಯಾರ್ಥಿನಿಲಯದಲ್ಲಿ ತಂಗುವುದಿಲ್ಲ.
ಗ್ರಾಮದ ಹೊರವಲಯದಲ್ಲಿ ಇರುವ ಹಾಸ್ಟೆಲ್ನಲ್ಲಿ ಸುತ್ತುಗೋಡೆ ಹೊರತುಪಡಿಸಿ ಯಾವುದೇ ರೀತಿಯ ಬಂದೋಬಸ್ತ್ ಇಲ್ಲ. ರಾತ್ರಿ ವೇಳೆ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲೇ ಇರುವ ಸ್ಥಿತಿ ಇದೆ.
ಪೋಷಕರಲ್ಲಿ ಆತಂಕ: ಹಾಸ್ಟೆಲ್ ಸುತ್ತಮುತ್ತ ಜಮೀನು ಮತ್ತು ಕೆರೆ ಆವರಿಸಿದೆ. ಕಾಡುಹಂದಿಗಳ ಹಾವಳಿಇದೆ. ಕೆಲವು ಪೋಷಕರು ಊಟದ ನಂತರ ವಾಪಸ್ಸು ಮನೆಗೆ ಬರಲು ಮಕ್ಕಳಿಗೆ ತಿಳಿಸಿದ್ದಾರೆ. ಇಲಾಖೆಗೆ ದೂರು ಸಲ್ಲಿಸಿದ್ದರೂ ಕ್ರಮ ವಹಿಸಿಲ್ಲ ಎಂಬುದು ಗ್ರಾಮ ಪಂಚಾಯಿತಿ ಸದಸ್ಯ ಎಸ್. ಪುಟ್ಟಸ್ವಾಮಿ ದೂರು.
ಬಾಲಕಿಯರ ವಿದ್ಯಾರ್ಥಿ ನಿಯಲಕ್ಕೆ ಮಾತ್ರ ರಾತ್ರಿ ಕಾವಲುಗಾರರ ನೇಮಕಕ್ಕೆ ಅವಕಾಶವಿಎ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಸಿಬ್ಬಂದಿ ಇಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಮಹಾದೇವ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.