ಶಹಾಪುರ: ‘ವಿಜಯಪುರ ಜಿಲ್ಲೆಯಲ್ಲಿ ಕಾಲುವೆ ಮೂಲಕ ಕೆರೆಗೆ ನೀರು ತುಂಬುವ ನೆಪದಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರು ಬೆಳೆಗೆ ಕಾಯ್ದಿರಿಸಿದ ನೀರನ್ನು ಕಬಳಿಸಲಾಗುತ್ತಿದೆ. ಇದರಿಂದ ಬೇಸಿಗೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ’ ಎಂದು ಶಾಸಕ ಗುರು ಪಾಟೀಲ ಶಿರವಾಳ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಲಾಶಯದ ಹೆಚ್ಚುವರಿ ನೀರನ್ನು ನದಿಗೆ ಹರಿಬಿಡುವ ಸಂದರ್ಭದಲ್ಲಿ (ಮಳೆಗಾಲದಲ್ಲಿ) ಕೆರೆ ತುಂಬಿಸಿಕೊಳ್ಳಬೇಕು. ಕುಡಿಯಲು ಅವಕಾಶ ಹಾಗೂ ಅಂತರ್ಜಲಮಟ್ಟ ಹೆಚ್ಚಾಗುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ.
ಆದರೆ, ನೀರಾವರಿ ಸಚಿವ ಎಂ.ಬಿ.ಪಾಟೀಲ ಅವರ ಒತ್ತಡಕ್ಕೆ ಮಣಿದ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಆಲಮಟ್ಟಿಯಲ್ಲಿ ಹಿಂಗಾರು ಬೆಳೆಗೆ ಕಾಯ್ದಿರಿಸಿದ ನೀರನ್ನು ಕೆರೆಗೆ ಹರಿಬಿಡುವುದರ ಜತೆಯಲ್ಲಿ ನೀರಾವರಿ ಯೋಜನೆಗೂ ಬಳಿಸಿಕೊಂಡಿದ್ದಾರೆ’ ಎಂದು ಆರೋಪಿಸಿದರು.
‘ಇದರಿಂದ ಕೃಷ್ಣಾ ಅಚ್ಚಕಟ್ಟು ಪ್ರದೇಶದ ಎಸ್ಬಿಸಿ, ಎಂಬಿಸಿ, ಜೆಬಿಸಿ ವ್ಯಾಪ್ತಿಯ ರೈತರಿಗೆ ಹಿಂಗಾರು ಬೆಳೆಗೆ ನೀರಿಲ್ಲದಂತಾಗುತ್ತದೆ. ಈಗಾಗಲೇ ಸುರಪುರ, ಜೇವರ್ಗಿ, ಯಾದಗಿರಿ, ದೇವದುರ್ಗ ಕ್ಷೇತ್ರದ ಶಾಸಕರ ಗಮನಕ್ಕೆ ತರಲಾಗಿದೆ. ನಮ್ಮ ಪಾಲಿನ ನೀರನ್ನು ಕಸಿದುಕೊಂಡರೆ ಮುಂದಿನ ವಾರದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.