ಗುರುಮಠಕಲ್: ಸಮೀಪದ ಚಂಡರಕಿ ಗ್ರಾಮದಲ್ಲಿ ನಡೆಯಲಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆದರು.ಗ್ರಾಮದ ಅಪ್ರಾಪ್ತನಿಗೆ ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ಗೊಲ್ಲಗಡ್ಡ ಗ್ರಾಮದ ಅಪ್ರಾಪ್ತೆಯೊಂದಿಗೆ ಗುರುವಾರ ವಿವಾಹ ನಡೆಯಲಿತ್ತು. ಮಾಹಿತಿ ತಿಳಿದ ಸಿಡಿಪಿಒ ವನಜಾಕ್ಷಿ, ಚೈಲ್ಡ್ ಲೈನ್ ಅಧಿಕಾರಿ ನಾಗಪ್ಪ ಹಾಗೂ ತಂಡದವರು ಬುಧವಾರ ಸಂಜೆ ಗ್ರಾಮಕ್ಕೆ ತೆರಳಿ, ಪೋಷಕರ ಮನವೊಲಿಸಿ ಬಾಲ್ಯವಿವಾಹ ತಡೆದರು.
‘ಇಬ್ಬರೂ ವಯಸ್ಕರಾದ ನಂತರವೇ ವಿವಾಹ ಮಾಡುತ್ತೇವೆ’ ಎಂಬ ಮುಚ್ಚಳಿಕೆಯನ್ನೂ ಬರೆಯಿಸಿಕೊಂಡರು.ಅಂಗನವಾಡಿ ಮೇಲ್ವಿಚಾರಕಿ ಗಂಗೂಬಾಯಿ, ಪೊಲೀಸರು ಹಾಜರಿದ್ದರು.‘ಎರಡೇ ದಿನಗಳ ಅಂತರದಲ್ಲಿ ಇದು ಮೂರನೇ ಪ್ರಕರಣ. ಇಂತಹ ಪ್ರಕರಣಗಳ ಕುರಿತು ಮಾಹಿತಿ ಸಿಕ್ಕಲ್ಲಿ ಮಕ್ಕಳ ಸಹಾಯವಾಣಿ 1098, ಅಂಗನವಾಡಿ ಕೇಂದ್ರ, ಶಿಕ್ಷಕರು, ಶಿಕ್ಷಣಾಧಿಕಾರಿಗಳು ಇಲ್ಲವೇ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು’ ಎಂದು ವನಜಾಕ್ಷಿ ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.
‘ಬಾಲ್ಯವಿವಾಹ ಮಾಡಿಸುವ ಪೋಷಕರಿಗೆ ₹1 ಲಕ್ಷ ದಂಡ ಮತ್ತು ಎರಡು ವರ್ಷ ಜೈಲು ಶಿಕ್ಷೆ. ವಿವಾಹಕ್ಕೆ ಸಹಕರಿಸಿದ ಪುರೋಹಿತ, ವಾದ್ಯ ಮೇಳ, ಛತ್ರ, ಅಡುಗೆಯವರು, ಮದುವೆಗೆ ಹಾಜರಾದವರನ್ನೂ ಅಪರಾಧಿಗಳೆಂದು ಪರಿಗಣಿಸಲಾಗುವುದು ಮತ್ತು ಅವರಿಗೂ ₹1 ವರ್ಷದ ಜೈಲುವಾಸ ಮತ್ತು ₹1 ಲಕ್ಷ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.