ಶಹಾಪುರ: ‘ಸಕಲ ಜೀವಸಂಕುಲಕ್ಕೆ ಆಧಾರವಾಗಿರುವುದು ಅರಣ್ಯ ಸಂಪತ್ತು. ಮಾನವನ ಅತಿಯಾದ ಆಸೆಯಿಂದ ಮರಗಳನ್ನು ಕಡಿದು ಹಾಕಿ ಅರಣ್ಯ ಸಂಪತ್ತು ನಾಶ ಮಾಡುತ್ತಿರುವುದು ನೋವಿನ ಸಂಗತಿ’ ಎಂದು ಶಾಸಕ ಗುರು ಪಾಟೀಲ್ ಶಿರವಾಳ ಹೇಳಿದರು. ತಾಲ್ಲೂಕಿನ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಕೃಷಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಹೊಣೆಯು ಹೆಚ್ಚಾಗಿದೆ. ರೈತರಿಗೆ ಮರಗಳ ಸಂರಕ್ಷಣೆ ಯಿಂದ ಉಂಟಾಗುವ ಅನುಕೂಲ ಹಾಗೂ ಪರಿಸರದ ಮೇಲೆ ಆಗುವ ಬದಲಾವಣೆಯ ಬಗ್ಗೆ ಜಾಗೃತಿ ಹಾಗೂ ಅರಿವು ಮೂಡಿಸಬೇಕು. ಮರವನ್ನು ದತ್ತು ತೆಗೆದುಕೊಂಡು ಪೋಷಣೆಯ ಮಾಡುವ ವಿನೂತನ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಹಾಕಿಕೊಳ್ಳಬೇಕು’ ಎಂದರು.
ಕಾಲೇಜಿನ ಡೀನ್ ಡಾ.ಸುರೇಶ ಪಾಟೀಲ್ ಮಾತನಾಡಿ, ‘ಯುವ ಸಮು ದಾಯ ಸಸಿಯನ್ನು ನೆಟ್ಟು ಅದರ ಪಾಲನೆ ಹಾಗೂ ಪೋಷಣೆ ಮಾಡಬೇಕು. ಅರಣ್ಯ ಸಂಪತ್ತು ನಮ್ಮ ಬದುಕಿನ ಉಸಿರು ಆಗಿದೆ. ಹೆಚ್ಚು ಮರಗಳನ್ನು ಬೆಳೆಸುವ ಮೂಲಕ ಬರಡು ನೆಲದಲ್ಲಿ ಹಸಿರು ಬೆಳೆಸಬೇಕಾಗಿದೆ’ ಎಂದರು. ವಲಯ ಅರಣ್ಯ ಅಧಿಕಾರಿ ಮಹ್ಮದ ಅಸದ. ಕೃಷಿ ವಿಜ್ಞಾನಿ ಡಾ.ಜೆ. ತುಳಸಿರಾಮ, ಡಾ.ಬಸವರಾಜ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.