ADVERTISEMENT

ನೀರಿನ ನಿರೀಕ್ಷೆಯಲ್ಲಿ ಕಾಲುವೆ ಕೊನೆಯ ರೈತರು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2014, 6:52 IST
Last Updated 21 ಏಪ್ರಿಲ್ 2014, 6:52 IST

ಹುಣಸಗಿ: ರಾಜನಕೋಳೂರು ಸಮೀ­ಪದ ಹುಣಸಗಿ ವಿತರಣಾ ಕಾಲುವೆ ನವೀಕರಣ ಕಾಮಗಾರಿ ಭರದಿಂದ ಸಾಗಿದ್ದು, ಕೊನೆಯ ಭಾಗದ ಗ್ರಾಮ­ಗಳಿಗೆ ಸಮರ್ಪಕ ನೀರು ತಲುಪುವುದೇ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಸುಮಾರು11.52 ಕಿ.ಮೀ. ಉದ್ದದ ಈ ಕಾಲುವೆ ನಿರ್ಮಾಣಕ್ಕಾಗಿ ಅಂದಾಜು ₨ 38 ಕೋಟಿ ಖರ್ಚು ಮಾಡಲಾಗುತ್ತಿದೆ. 26 ಸಾವಿರ ಹೆಕ್ಟೇರ್ ಪ್ರದೇಶಕ್ಕೆ  ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ.

ಗೆದ್ದಲಮರಿ, ಕಕ್ಕೇರಾ, ದೇವಾ­ಪುರ,ಹುಣಸಗಿ ಸೇರಿ 90 ಹಳ್ಳಿಗಳ ಜಮೀನು ನೀರಾವರಿಗೆ ಒಳಪಡುತ್ತವೆ. ಆದರೆ  ಶಾಂತಪುರ, ತಿಂಥಣಿ, ಅರಳ­ಹಳ್ಳಿ, ಬನದೊಡ್ಡಿ ಸೇರಿದಂತೆ ಇತರ ಗ್ರಾಮಗಳಿಗೆ ನೀರು ತಲುಪಿಸಲು ಸಾಧ್ಯ­ವಾಗಿರಲಿಲ್ಲ.

ಶಾಖಾ ಕಾಲುವೆಗೆ ಕಾಮಗಾರಿ ವೀಕ್ಷಿಸಿದ ಕಾರ್ಯ ನಿರ್ವಾಹಕ ಎಂಜಿನಿಯರ್‌ಗಳಾದ ಎಸ್. ರಂಗಾ­ರಾಂ, ಅರುಣಕುಮಾರ ಬಾರಿಕೇರಿ, ಮತ್ತು ಸಹಾಯಕ ಎಂಜಿನಿಯರ್‌ ಎಚ್.ರೆಹಮಾನ್‌ ಮಾತನಾಡಿ, ಹುಣ­ಸಗಿ ವಿತರಣಾ ಕಾಲುವೆ ನವೀ­ಕರಣ ತಾಂತ್ರಿಕ ದೃಷ್ಟಿಯಿಂದ ಒಂದು ಸವಾಲಾಗಿತ್ತು. ಎರಡು ಕಿ.ಮೀ. ಮಾತ್ರ ಕಠಿಣ ಕೆಲಸವಾಗಿದೆ. ಇದು ಹೆಚ್ಚು ಆಳದ ಕಾಲುವೆ ಇದ್ದು, ಇದನ್ನು ತೀವ್ರ ಕಾಳಜಿಯಿಂದ ಹಿರಿಯ ತಾಂತ್ರಿಕ ಅಧಿಕಾರಿಗಳ ಅವಲೋಕನ ಮತ್ತು ಸಹಕಾರದೊಂದಿಗೆ ನಿರ್ಮಾಣ ಹಾಗೂ ನವೀಕರಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹುಣಸಗಿ ವಿತರಣಾ ಕಾಲುವೆಗೆ ನವೀಕರಣ ಕಾಮಗಾರಿಯನ್ನು ಆಧು­ನಿಕ ತಂತ್ರಜ್ಞಾನದಿಂದ ಕೈಗೊಳ್ಳ­ಲಾಗಿದ್ದು, ನೀರು ಸೋರಿಕೆಯಾಗುವ ಸಾಧ್ಯತೆ ಇಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.

ಮೇಲ್ಭಾಗದ ರೈತರು ನೀರಾವರಿಗೆ ಒಳಪಡದ ಜಮೀನಿಗೆ ನೀರು ಪಡೆ­ಯಲಿ. ಆದರೆ ಕಾಲುವೆ ಕೊನೆ ಭಾಗದ ರೈತರ ಜಮೀನುಗಳಿಗೂ ನೀರು ಸಿಗು­ವಂತಾಗಬೇಕು. ಈ ದಿಸೆಯಲ್ಲಿ ಅಧಿ­ಕಾರಿಗಳು ಮೃದು ಧೋರಣೆ ತೋರದೇ ನವೀಕರಣಗೊಂಡ ಕಾಲು­ವೆಗೆ ಯಾರಾದರೂ ಹಾನಿ ಮಾಡಿ­ದರೆ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಆಗ ಮಾತ್ರ ಎಲ್ಲ ರೈತರಿಗೆ ಅನುಕೂಲವಾಗಲಿದೆ ಎಂದು ಕಾಲುವೆ ಕೊನೆಯ ಭಾಗದ ರೈತ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರಕುಂದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.