ADVERTISEMENT

‘ನೀರು ಪೋಲು ತಡೆ ಕರ್ತವ್ಯವಾಗಲಿ’

ಪುರಸಭೆ ಕಚೇರಿಯಲ್ಲಿ ವಿಶ್ವ ಜಲ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 8:24 IST
Last Updated 23 ಮಾರ್ಚ್ 2017, 8:24 IST

ಸೇಡಂ: ಭೂಮಿಯ ಮೇಲೆ ಪ್ರತಿಶತ 75ಕ್ಕಿಂತಲೂ ಅಧಿಕ ಭಾಗ ನೀರು ಇದ್ದರೂ ಸಹ ಕುಡಿಯುವುದಕ್ಕೆ ಯೋಗ್ಯವಾದದ್ದು ಕೇವಲ 25ರಷ್ಟು ಮಾತ್ರ. ಪ್ರತಿ ಹನಿಯನ್ನು ಪೋಲಾಗದಂತೆ ಕರ್ತವ್ಯವೆಂದು ತಿಳಿದು ನೀರನ್ನು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಕವಿತಾ ಉಂಡೋಡಿ ಹೇಳಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಪುರಸಭೆ ಕಚೇರಿ ಜಂಟಿಯಾಗಿ ಆಯೋಜಿಸಿದ್ದ ವಿಶ್ವಗ್ರಾಹಕರ ಹಕ್ಕುಗಳ ದಿನ ಹಾಗೂ ವಿಶ್ವ ಜಲ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ದೈನಿಕ ಚಟುವಟಿಕೆಯ ಪ್ರತಿ ಕಾರ್ಯಕ್ಕೂ ಸಹ ಪ್ರತಿಯೊಬ್ಬರಿಗೂ ನೀರು ಅಗತ್ಯವಿದೆ. ಮಾನವನ ಬದುಕು ಸಾಗಿಸುವ ಅತ್ಯಮೂಲ್ಯಗಳಲ್ಲಿ ನೀರು ಕೂಡ ಒಂದಾಗಿದೆ ಎಂದು ತಿಳಿಸಿದರು.

ವ್ಯಾಪಾರದ ಸಂದರ್ಭದಲ್ಲಿ ಗ್ರಾಹಕರು ವಸ್ತುವಿನ ಬಗ್ಗೆ ಸಮಗ್ರವಾಗಿ ತಿಳಿದುಕೊಂಡು ಮಾರಾಟಗಾರರಿಂದ ವಸ್ತುವನ್ನು ಖರೀದಿ ಮಾಡಬೇಕು. ವ್ಯಾವಹಾರಿಕ ಚಟುವಟಿಕೆಗಳು ಕಾನೂನಾತ್ಮಕವಾಗಿ ನಡೆದಲ್ಲಿ ನಾವು ಮುಂದಿನ ದಿನಗಳಲ್ಲಿ ನ್ಯಾಯ ಪಡೆದುಕೊಳ್ಳಲು ಅವಕಾಶ ಸಿಗುತ್ತದೆ. ಯಾವುದೇ ಕಾರಣಕ್ಕೂ ದಲ್ಲಾಳಿಗಳ ಹಾವಳಿಯಿಂದ ಮೋಸ ಹೋಗಿ ನಷ್ಟ ಅನುಭವಿಸಬಾರದು ಎಂದರು.

ಪುರಸಭೆ ಅಧ್ಯಕ್ಷೆ ಮಲ್ಲಮ್ಮ ಚಂದ್ರಕಾಂತ ಚವಾಣ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಶರಣಯ್ಯಸ್ವಾಮಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಯುಬ್ ಅಲಿ ಜಿಗರ್, ವಕೀಲರ ಸಂಘದ ಅಧ್ಯಕ್ಷ ರಾಜೇಂದ್ರ ಮುನ್ನೂರ, ವಕೀಲ ನಾಗೇಶ ಮಿಟ್ಟಿ, ಬಸವರಾಜ ತಡಕಲ್, ಸಂಜೀವರೆಡ್ಡಿ ಕೋಡ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.