ADVERTISEMENT

ಪ್ರಕರಣಗಳ ನಿಷ್ಪಕ್ಷಪಾತ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 6:08 IST
Last Updated 20 ಡಿಸೆಂಬರ್ 2017, 6:08 IST

ಸುರಪುರ: ‘ರಾಜ್ಯದಲ್ಲಿ ಅವ್ಯಾಹತವಾಗಿ ನಡೆದಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಪ್ರಕರಣಗಳನ್ನು ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಬೇಕು’ ಎಂದು ಕಡಕೋಳ ಮಡಿವಾಳೇಶ್ವರ ಶಾಖಾಮಠದ ಬಸಣ್ಣ ಶರಣರು ಒತ್ತಾಯಿಸಿದರು.

ನಗರದ ತಹಶೀಲ್ದಾರ್‌ ಕಚೇರಿ ಎದುರು ಮಂಗಳವಾರ ಹಿಂದೂ ಹಿತರಕ್ಷಣಾ ವೇದಿಕೆಯು ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ನಮ್ಮ ನಾಡು ಶರಣರು, ಸೂಫಿ, ಸಂತರ ಬೀಡು. ಇವರೆಲ್ಲರೂ ಭಾತೃತ್ವ, ಅಹಿಂಸೆ ಬೋಧಿಸಿದ್ದಾರೆ. ಹಿಂದೂಗಳ ದೇಶವಾದ ನಮ್ಮಲ್ಲಿ ಹಿಂದೂಗಳ ಹತ್ಯೆ ನಡೆಯುತ್ತಿರುವುದು ದುರದೃಷ್ಟಕರ. ಭವಿಷ್ಯದಲ್ಲಿ ಮತ್ತೆ ಇಂತಹ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

ಉಪನ್ಯಾಸಕ ವೇಣುಗೋಪಾಲ ಜೇವರ್ಗಿ ಮಾತನಾಡಿ, ‘ಹೊನ್ನಾವರದ ಪರೇಶ್ ಮೇಸ್ತ, ಬೆಂಗಳೂರಿನ ರುದ್ರೇಶ, ಮಡಿಕೇರಿಯ ಕುಟ್ಟಪ್ಪ, ಶಿವಮೊಗ್ಗದ ವಿಶ್ವನಾಥ, ಮೈಸೂರಿನ ರಾಜು, ಮೂಡಬಿದರೆಯ ಪ್ರಶಾಂತ್ ಪೂಜಾರಿ, ಬಂಟ್ವಾಳದ ಶರತ್ ಮಡಿವಾಳ ಸೇರಿಂದತೆ 20ಕ್ಕೂ ಹೆಚ್ಚು ಜನರ ಹತ್ಯೆ ನಡೆದಿರುವುದು ಕಳವಳಕಾರಿ’ ಎಂದರು.

ಸಂಘ ಪರಿವಾರದ ಮುಖಂಡ ಲಕ್ಷ್ಮೀಕಾಂತ ದೇವರ ಗೋನಾಲ ಮಾತನಾಡಿ, ‘ರಾಜ್ಯದಾದ್ಯಂತ ನಡೆದಿರುವ ಹಿಂದೂ ಕಾರ್ಯರ್ತರ ಹತ್ಯೆಗಳ ಹಿಂದೆ ಐಎಸ್ಐಎಸ್, ಇಂಡಿಯನ್ ಮುಜಾಹಿದ್ದೀನ್ ನಂತಹ ಭಯೋತ್ಪಾದಕ ಸಂಘಟನೆಗಳ ಕೈವಾಡ ಇದೆ. ಅವುಗಳನ್ನು ಬೆಂಬಲಿಸುವ ಕೆಎಫ್‌ಡಿ, ಪಿಎಫ್ಐ ಮತ್ತು ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸಲು ಸರ್ಕಾರ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ’ ಎಂದು ದೂರಿದರು.

ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಸುರೇಶ ಅಂಕಲಗಿ ಅವರಿಗೆ ಸಲ್ಲಿಸಿದರು. ಎಬಿವಿಪಿ ಮುಖ್ಯಸ್ಥರಾದ ಉಪೇಂದ್ರ ನಾಯಕ ಸುಬೇದಾರ, ಶರಣುನಾಯಕ ಬಿಚಗತ್ತಗೇರಾ, ರಾಘವೇಂದ್ರ ಮಾಚಗುಂಡಾಳ, ಭೈರಣ್ಣ ತಿಂಥಣಿ, ನಾಗರಾಜ ಮಕಾಶಿ ಮಾತನಾಡಿದರು.

ಮಲ್ಲೇಶಿ ಪಾಟೀಲ ನಾಗರಾಳ, ಸಂದೀಪ ಜೋಷಿ, ಗುರುನಾಥರೆಡ್ಡಿ ಶೀಲವಂತ, ರವಿ ಚಿಕನಳ್ಳಿ, ಸಂತೋಷ ಕುಂಬಾರ, ಶರಣು ನಾಯಕ, ಕುಮಾರ ಡೊಣ್ಣೆಗೇರಾ, ಪರಶುರಾಮ ಗುಡ್ಡಕಾಯಿ, ದೇವುನಾಯಕ ಕಬಾಡಗೇರಾ, ನಂದುಲಾಲ ಠೇವಣಿ, ದೇವು ಬೈಚಬಾಳ, ಸೋಮನಾಥ ಕೆಂಭಾವಿ, ಶರಣು ತಿಮ್ಮಾಪುರ, ವಿಜಯ ವಿಶ್ವಕರ್ಮ, ಪರಮಣ್ಣ ಕನ್ನೆಳ್ಳಿ, ಹರೀಶ ತ್ರಿವೇದಿ, ಪ್ರೇಮ, ಮಹೇಂದ್ರಕುಮಾರ, ಕನಕಾಚಲ ಕನಕಗಿರಿ, ಪರಮಣ್ಣ ಕನ್ನೆಳ್ಳಿ, ಅಯ್ಯಪ್ಪ ಸುಗ್ಗಿ, ಮಾನಸಿಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.