ADVERTISEMENT

ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಷಡ್ಯಂತ್ರ

ಅಬ್ಬೆತುಮಕೂರು ಸಿದ್ದ ಸಂಸ್ಥಾನ ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಆರೋಪ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 10:38 IST
Last Updated 20 ಮಾರ್ಚ್ 2018, 10:38 IST

ಯಾದಗಿರಿ: ‘ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾನಮಾನ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ನಿರ್ಧರಿಸಿರುವುದು ಕಾಂಗ್ರೆಸ್‌ ಸರ್ಕಾರದ ಷಡ್ಯಂತ್ರವಾಗಿದೆ’ ಎಂದು ಜಿಲ್ಲೆಯ ಅಬ್ಬೆತುಮಕೂರು ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಆರೋಪಿಸಿದರು.

‘ವರದಿ ನೀಡಲು ಆರು ತಿಂಗಳು ಕಾಲಾವಧಿ ಕೇಳಿದ್ದ ಸಮಿತಿ ಕೇವಲ ಎರಡು ತಿಂಗಳಲ್ಲಿ ಸರ್ಕಾರಕ್ಕೆ ವರದಿ ನೀಡಿರುವುದು ನೋಡಿದರೆ ಮೇಲ್ನೋಟಕ್ಕೆ ಇದು ಸರ್ಕಾರದ ಷಡ್ಯಂತ್ರ ಅಂತಲೇ ಅನ್ನಿಸುತ್ತದೆ. ಧರ್ಮ ಮತ್ತು ಆಚರಣೆಯ ವಿಷಯದಲ್ಲಿ ಸರ್ಕಾರಗಳು ಏನೇ ನಿರ್ಣಯಗಳನ್ನು ತೆಗೆದುಕೊಂಡರೂ ಜನರ ಭಾವನೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ವೀರಶೈವ ಲಿಂಗಾಯತ ಎಂಬುದು ಸಾವಿರಾರು ವರ್ಷಗಳ ಸನಾತನ ಧರ್ಮ. ಅದರಲ್ಲಿ ಒಡಕು ಮೂಡಿಸಿ ಸರ್ಕಾರ ತನ್ನ ಕಾರ್ಯಸಾಧನೆಗೆ ಮುಂದಾಗಿದೆ. ಇದರಿಂದ ಸರ್ಕಾರ ತಕ್ಕ ಪಾಠ ಕಲಿಯಲಿದೆ’ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಕ್ರಿಯಾಶಕ್ತಿ, ಜ್ಞಾನಶಕ್ತಿ ಪ್ರತೀಕವಾಗಿ ವೀರಶೈವ ಲಿಂಗಾಯತ ಧರ್ಮ ಬೆಳೆದು ಬಂದಿದೆ. ಧರ್ಮತತ್ವದಲ್ಲಿ ಈಗ ಎರಡು ಪಂಥಗಳನ್ನು ಹುಟ್ಟುಹಾಕುವ ಉದ್ದೇಶ ಇಟ್ಟುಕೊಂಡೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಷಡ್ಯಂತ್ರ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಸಂಚು ರೂಪಿಸುವ ಉದ್ದೇಶದಿಂದಲೇ ಸಮಿತಿ ರಚಿಸಿ ಅವರಿಗೆ ಬೇಕಾದಂತಹವರನ್ನು ಸಮಿತಿ ಯಲ್ಲಿ ನೇಮಿಸಿದ್ದಾರೆ. ಸಮಿತಿಯಲ್ಲಿ ಎರಡೂ ಗುಂಪಿನ ಪಂಡಿತರನ್ನು, ಧರ್ಮ ಸಹಿಷ್ಣರನ್ನು ಸರ್ಕಾರ ನೇಮಿಸುವ ಮೂಲಕ ಸಮತೋಲನ ಕಾಯ್ದುಕೊಳ್ಳು ವಂತಹ ಕಾರ್ಯ ಮಾಡಿಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.