ADVERTISEMENT

ಬಸವಣ್ಣ ಪ್ರೇರಕ ಶಕ್ತಿ: ಸ್ವಾಮೀಜಿ

ದೇವರಗೋನಾಲ: ಬಸವೇಶ್ವರ ಯುವಕ ಸಂಘ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2015, 7:00 IST
Last Updated 6 ಜುಲೈ 2015, 7:00 IST

ಸುರಪುರ:  ಸಮಾಜಮುಖಿ ಮತ್ತು ಅಂತರ್ಮುಖಿ ಸಾಧನೆಗೆ ಸಂಸಾರ ತೊಡಕಾಗುತ್ತದೆ ಎಂಬುದು ಕೆಲವರ ಅಭಿಮತ. ಸಂಸಾರದಲ್ಲಿದ್ದು ಅಪೂರ್ವ ಸಾಧನೆ ಮಾಡಬಹುದು ಎಂಬುದನ್ನು ಹಲವರು ಸಾಧಿಸಿ ತೋರಿಸಿದ್ದಾರೆ. ಅಂಥವರ ಸಾಲಿಗೆ ಬಸವಣ್ಣ ಸೇರುತ್ತಾರೆ ಎಂದು ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯ ಹೇಳಿದರು.

ತಾಲ್ಲೂಕಿನ ದೇವರಗೋನಾಲದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲ್ಲೂಕು ವೀರಶೈವ ಸಮಿತಿ ಸಂಚಾಲಿತ ಬಸವೇಶ್ವರ ಯುವಕ ಸಂಘ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವಣ್ಣ ಒಬ್ಬ ವಿಚಾರವಾದಿ, ಸುಧಾರಣಾವಾದಿ, ಪ್ರಗತಿಪರವಾದಿ ಅದಕ್ಕೂ ಮಿಗಿಲಾಗಿ ಆದರ್ಶವಾದಿ. ಹಳೆಯ ಸಂಪ್ರದಾಯಗಳನ್ನು ವಿರೋಧಿಸುವುದು ಮಾತ್ರ ಅವರ ಹೊಣೆಗಾರಿಕೆ ಆಗಿರಲಿಲ್ಲ, ಅದರೊಟ್ಟಿಗೆ ಹೊಸ ಸಮಾಜವನ್ನು ಕಟ್ಟುವುದು ಅವರ ದೊಡ್ಡ ಪ್ರಯತ್ನವಾಗಿತ್ತು ಎಂದರು.

ಬಸವಣ್ಣ ನಮಗೆ ಪ್ರೇರಕ ಶಕ್ತಿ. ಇಂತಹ ಶ್ರೇಷ್ಠ ಶರಣರ ಹೆಸರಿನಲ್ಲಿ ಯುವಕ ಸಂಘ ಆರಂಭಿಸಿರುವುದು ಪ್ರಶಂಸನೀಯ. ಸಂಘದ ಸದಸ್ಯರು ಬಸವಣ್ಣನ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಸಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ತೊಡಗಬೇಕು. ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದರು.

ತಾಲ್ಲೂಕು ವೀರಶೈವ ಯುವ ಘಟಕದ ಅಧ್ಯಕ್ಷ ಪ್ರಕಾಶ ಅಂಗಡಿ ಮಾತನಾಡಿ, ಬಸವಣ್ಣನವರ ಆದರ್ಶ ಕಲ್ಪನೆಗಳನ್ನು ವಿಸ್ತರಿಸಲು ತಾಲ್ಲೂಕಿನಾದ್ಯಂತ ಯುವಕ ಸಂಘಗಳನ್ನು ಆರಂಭಿಸಲಾಗುತ್ತಿದೆ. ಈ ಸಂಘಗಳ ಮೂಲಕ ಯುವಕರನ್ನು ಸನ್ಮಾರ್ಗದೆಡೆಗೆ ಕೊಂಡೊಯ್ಯುವ ಕೆಲಸ ನಡೆಯುತ್ತಿದೆ. ಕೆಟ್ಟ ಚಟಗಳ ವರ್ಜ್ಯ, ಉತ್ತಮ ಸಂಸ್ಕಾರ ಬೆಳೆಸುವ ಕಾರ್ಯ ನಡೆಯುತ್ತಿದೆ ಎಂದು ವಿವರಿಸಿದರು.

ಕಾಂಗ್ರೆಸ್‌ ಮುಖಂಡ ರಾಜಾ ವೇಣುಗೋಪಾಲ ನಾಯಕ ಸಂಘ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಸಮಾಜದ ಉಪಾಧ್ಯಕ್ಷ ಬಸಣ್ಣ ಬೂದೂರ ಮಾತನಾಡಿದರು. 

ಹಯ್ಯಾಳಲಿಂಗೇಶ್ವರ ದೇವಸ್ಥಾನದ ಮಾರ್ಥಂಡಪ್ಪ  ಮುತ್ಯಾ, ಮೌನೇಶ್ವರ ದೇವಸ್ಥಾನದ ಲಿಂಗಯ್ಯ ಮುತ್ಯಾ, ಹಿರೇಮಠದ ಬಸವಲಿಂಗಯ್ಯ ಸ್ವಾಮೀಜಿ, ಶಿವರಾಜಪ್ಪ ಗೋಲಗೇರಿ, ಸಂಗನಗೌಡ ವಜ್ಜಲ್, ಶರಣು ದಂಡಿನ್, ಶಿವಶರಣಪ್ಪ ಹೆಡಗಿನಾಳ, ಸೂಗುರೇಶ ವಾರದ, ಅಮರೇಶ ಸರ್ಜಾಪುರ, ಬಸನಗೌಡ ದೇವಾಪುರ, ಸಂಗಣ್ಣ ಏಕ್ಕೆಳ್ಳಿ ಇದ್ದರು. ರಾಚಪ್ಪ ಮೇಟಿ ಸ್ವಾಗತಿಸಿದರು. ಬಾದ್ಯಾಪುರ ನಿರೂಪಿಸಿದರು. ಸಿದ್ದಣಗೌಡ ಹೆಬ್ಬಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT