ADVERTISEMENT

ಬಾಲ್ಯವಿವಾಹ ತಡೆಗೆ ಜಾಗೃತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 25 ಮೇ 2017, 6:59 IST
Last Updated 25 ಮೇ 2017, 6:59 IST

ಶಹಾಪುರ: ‘ಬಾಲ್ಯ ವಿವಾಹ ನಾಗರಿಕ ಸಮಾಜದ ಅನಿಷ್ಠ ಪದ್ಧತಿಯಾಗಿದೆ. ಬಾಲ್ಯ ವಿವಾಹ ತಡೆಗೆ ಸಮಾಜದ ಪ್ರತಿಯೊಬ್ಬರೂ ಕೈ ಜೋಡಿಸಬೇಕು’ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವಿಶ್ವನಾಥರಡ್ಡಿ ಮಾಲಿ ಪಾಟೀಲ ಹೇಳಿದರು.

ಇಲ್ಲಿನ ಮಕ್ಕಳ ಅಭಿವೃದ್ಧಿ ಯೋಜನಾ ಇಲಾಖೆಯ ಆವರಣದಲ್ಲಿ ಬುಧವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ 1098 ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ತಡೆ ಹಾಗೂ ಶಾಲೆ ಕಡೆ ನನ್ನ ನಡೆ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದೆ. ಏನೂ ಅರಿಯದ ಮುಗ್ಧ ಮಕ್ಕಳನ್ನು ಮದುವೆ ಮಾಡಬಾರದು. ವರನಿಗೆ ಕಡ್ಡಾಯವಾಗಿ 21 ಹಾಗೂ ವಧುಗೆ 18 ವರ್ಷ ತುಂಬಿರಬೇಕು’ ಎಂದರು.

‘ಜಾಥಾವು ಕಳೆದ ಜನವರಿ 21ರಿಂದ ಜೂನ್ 21ರ ವರೆಗೆ ಜಿಲ್ಲೆಯ ಪ್ರತಿಯೊಂದು ತಾಲ್ಲೂಕು ಮಟ್ಟದಲ್ಲಿ ಸಂಚರಿಸುತ್ತಿದೆ. ಜಾಗೃತಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಲಾ ಮಕ್ಕಳಲ್ಲಿಯೂ ಅರಿವು ಮೂಡಿಸಲು ಭಾಷಣ, ಪ್ರಬಂಧ ಸ್ಫರ್ಧೆ, ಚರ್ಚಾ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಸಿಡಿಪಿಒ ಟಿ.ಪಿ.ದೊಡ್ಮನಿ ಹೇಳಿದರು.

ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಯಿತು. ಜಾಥಾಕ್ಕೆ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ನಾಮದೇವ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ನ್ಯಾಯಾಧೀಶರಾದ ತಯ್ಯಾಬ್‌ ಸುಲ್ತಾನಾ, ಎಚ್‌.ಎ.ಸಾತ್ವಿಕ, ತಹಶೀಲ್ದಾರ್‌ ಸೋಮಶೇಖರ ಹಾಗರಗುಂಡಗಿ, ಪರ್ವತರಡ್ಡಿ, ಮಲ್ಲಪ್ಪ ಆಶನಾಳ, ಸಾಬಯ್ಯ, ಲೋಹಿತಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.