ADVERTISEMENT

ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಮುದ್ನಾಳ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 6:54 IST
Last Updated 7 ಜುಲೈ 2017, 6:54 IST

ಯಾದಗಿರಿ: ‘ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಭಿವೃದ್ಧಿಯ ಜತೆಗೆ ಪಾರದರ್ಶಕ ಆಡಳಿತ ನಡೆಸುತ್ತಿದೆ’ ಎಂದು ಬಿಜೆಪಿ ಹಿರಿಯ ಮುಖಂಡ ಡಾ.ವೀರಬಸವಂತ ರೆಡ್ಡಿ ಮುದ್ನಾಳ ಹೇಳಿದರು.

ಸಮೀಪದ ಕ್ಯಾತನಾಳ ಮತ್ತು ಹೆಗ್ಗಣಗೇರಾ ಗ್ರಾಮಗಳಲ್ಲಿ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರ ಜನ್ಮ ಶತಾಬ್ದಿಯ ಅಂಗವಾಗಿ ಬಿಜೆಪಿ ಬುಧವಾರ ಹಮ್ಮಿಕೊಂಡ ಸಂಪರ್ಕ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.

ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆಡಳಿತದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿತ್ತು. ಆದರೆ, ನಂತರ ಬಂದ ನರೇಂದ್ರ ಮೋದಿ ಸರ್ಕಾರ ರಾಷ್ಟ್ರದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತಿದೆ’ ಎಂದು ಹೇಳಿದರು.

ADVERTISEMENT

‘ಕರ್ನಾಟಕದಲ್ಲೂ ಯಡಿಯೂರಪ್ಪ ಮುಖ್ಯಂತ್ರಿಯಾಗಿದ್ದ ವೇಳೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವ ಮೂಲಕ ರೈತರ ಅಭಿವೃದ್ಧಿಗೆ ಯೋಜನೆ ರೂಪಿಸಿದರು. ಭ್ರೂಣಹತ್ಯೆ ತಡೆಯುವ ಸಲುವಾಗಿ ಭಾಗ್ಯಲಕ್ಷ್ಮೀ, ಹಿರಿಯರಿಗೆ ಸಂಧ್ಯಾಸುರಕ್ಷಾ ಮುಂತಾದ ಯೋಜನೆಗಳ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಿದ್ದರು. ಆದರೆ, ನಂತರ ಬಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಓಟ್‌ಬ್ಯಾಂಕ್ ರಾಜಕೀಯ ಮಾಡುತ್ತಿದೆ’ ಎಂದು ಹೇಳಿದರು.

‘ಬಿಜೆಪಿ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯವೇ ಹೊರತು ಇತರ ಪಕ್ಷಗಳಿಂದ ಸಾಧ್ಯವಿಲ್ಲ. ಹೀಗಾಗಿ,  ಮುಂಬರುವ ದಿನಗಳಲ್ಲಿ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡುವಂತೆ ಮುದ್ನಾಳ ಮನವಿ ಮಾಡಿದರು.

ಅವರು ಕ್ಯಾತನಾಳ ಮತ್ತು ಹೆಗ್ಗಣಗೇರಾ ಎರಡೂ ಗ್ರಾಮಗಳ ಪ್ರತಿಮನೆ-ಮನೆಗೂ ತೆರಳಿ ಬಿಜೆಪಿಯ ಅಭಿವೃದ್ಧಿ ಹಾಗೂ ಕಾಂಗ್ರೆಸ್ ಸರ್ಕಾರದ ವೈಫಲ್ಯ ಕುರಿತು ಜನರಿಗೆ ಮನವರಿಕೆ ಮಾಡಿಕೊಟ್ಟರು.

ಬಿಜೆಪಿ ಮುಖಂಡರಾದ ಸಿದ್ದಣ್ಣಗೌಡ ಕಾಡಂನೋರ್, ಮಾಜಿ ಅಧ್ಯಕ್ಷ ಎಪಿಎಂಸಿ ಭೀಮಣ್ಣಗೌಡ ಕ್ಯಾತನಾಳ, ನಾಗರೆಡ್ಡಿ ಪಾಟೀಲ್, ಮಹೇಂದ್ರರೆಡ್ಡಿ, ಭೀಮಣ್ಣ ಸಾಹುಕಾರ, ನಾಗರೆಡ್ಡಿ, ಮಲ್ಲಪ್ಪ ಇಟಗಿ, ಶರಣಪ್ಪ ಬಾಗ್ಲಿ, ಭೀಮಣ್ಣ ಪೂಜಾರಿ, ಅಬ್ದುಲ್ ಚಿಗಾನೂರ, ಭೀಮಣ್ಣ ಚಿನ್ನ, ಬಸವರಾಜ ಸಾಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.