ಗುರುಮಠಕಲ್: ದುರ್ನಾತ ಬೀರುವ ಚರಂಡಿಗಳು, ಕೆಸರು ಗದ್ದೆಗಳಾದ ರಸ್ತೆಗಳು, ಕುಡಿಯುವ ನೀರಿನ ಟ್ಯಾಂಕ್ ಸುತ್ತ ಸಂಗ್ರಹವಾಗಿರುವ ಕೊಳಚೆ ನೀರು... ಇದು ಪಟ್ಟಣದ ಕಟ್ಟಲಗೆರಾ ಬಡಾವಣೆಯ (ವಾರ್ಡ್ ಸಂಖ್ಯೆ 6) ದುಸ್ಥಿತಿ. ಬಡಾವಣೆಯಲ್ಲಿ ಮೂಲಸೌಕರ್ಯ ಕೊರತೆ ಇದ್ದು, ಸಾರ್ವಜನಿಕರ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಬಡಾವಣೆಯಲ್ಲಿನ ಚರಂಡಿಗಳ ಹೂಳು ತೆಗೆದು ಸ್ವಚ್ಛಗೊಳಿಸದ ಕಾರಣ ದುರ್ನಾತ ಬೀರುತ್ತಿವೆ. ‘ಚರಂಡಿ ಸ್ವಚ್ಛಗೊಳಿಸುವಂತೆ ಪುರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ದಲಿತ ಸಂಘರ್ಷ ಸಮಿತಿಯ (ಭೀಮವಾದ) ಭೀಮಶಪ್ಪ.ಎಸ್.ತಲಾರಿ, ಆಶನ್ನ ಬುದ್ಧ ಆರೋಪಿಸಿದರು.
ಚರಂಡಿಗಳು ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿವೆ. ಇದರಿಂದ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ ಎಂದು ಹೇಳಿದರು. ಶೌಚಾಲಯ ಇಲ್ಲದಿರುವುದರಿಂದ ಶೌಚಕ್ಕೆ ಹೋಗಲು ಸಂಜೆ ಆಗುವುದನ್ನು ಕಾಯಬೇಕಾದ ಸ್ಥಿತಿ ಇದೆ. ಮಹಿಳೆಯರಿಗೆ ಇದರಿಂದ ತುಂಬಾ ತೊಂದರೆಯಾಗುತ್ತಿದೆ. ಸರ್ಕಾರದ ಯಾವ ಸೌಲಭ್ಯಗಳು ಬಡಾವಣೆ ಜನರಿಗೆ ತಲುಪುತ್ತಿಲ್ಲ ಎಂದು ನಿವಾಸಿಗಳು ದೂರಿದರು.
ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಸೈಯದ್ ಅಹ್ಮದ್ ಅವರನ್ನು ಸಂಪರ್ಕಿಸಿದಾಗ, ‘ಬಡಾವಣೆ ಸಮಸ್ಯೆಗಳು ಗಮನಕ್ಕೆ ಬಂದಿರ ಲಿಲ್ಲ. ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.