ಕಕ್ಕೇರಾ: ಪಟ್ಟಣದ ವಾಲ್ಮೀಕಿ ಭವನದ ಕಟ್ಟಡದ ಕ್ಯೂರಿಂಗ್ಗಾಗಿ ಭಾನುವಾರ ನೀರು ಹಾಯಿಸುತ್ತಿದ್ದಾಗ ಕಟ್ಟಡದ ಮೇಲ್ಗಡೆಯ ಹೈಪವರ್ ವಿದ್ಯುತ್ ತಂತಿ ತಾಗಿ ಅಯ್ಯಪ್ಪ ಜೆಟ್ಟೆಪ್ಪ (15) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಸುದ್ದಿ ತಿಳಿದ ಕುಟುಂಬಸ್ಥರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ವಾಲ್ಮೀಕಿ ವೃತ್ತದಲ್ಲಿ ಬಾಲಕನ ಶವ ಇಟ್ಟು ಧರಣಿ ನಡೆಸಿದರು. ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಹೈಪವರ್ ತಂತಿ ತೆಗೆಯಬೇಕು ಎಂದು ಹಲವು ಬಾರಿ ಮನವಿ ಮಾಡಿದರೂ ಕ್ರಮಕೈಗೊಂಡಿಲ್ಲ. ವಿದ್ಯುತ್ ತಂತಿ ತೆಗೆದಿದ್ದರೆ ಅನಾಹುತ ತಪ್ಪುತಿತ್ತು. ಇದಕ್ಕೆ ಭೂಸೇನಾ ನಿಗಮದವರು ತೀರಾ ನಿರ್ಲಕ್ಷ್ಯ ವಹಿಸಿದ್ದರಿಂದ ದುರಂತ ಸಂಭವಿಸಿದೆ’ ಎಂದು ಹರಿಹಾಯ್ದರು.
‘ಮೃತನ ಕುಟುಂಬಕ್ಕೆ ಜೆಸ್ಕಾಂ ಪರಿಹಾರ ನೀಡಬೇಕು. ಇಂತಹ ಘಟನೆಗಳು ಮರುಕಳುಸದಂತೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು. ಮೃತ ಬಾಲಕನ ಶವದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ರಸ್ತೆ ಬಂದ್ ಮಾಡಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಯಿತು.
ಸುರಪುರ ಗ್ರೇಡ್-2 ತಹಶೀಲ್ದಾರ್ ಸುಫಿಯಾ ಸುಲ್ತಾನ್, ದೇವಾಪುರ ಜೆಸ್ಕಾಂ ಅಧಿಕಾರಿ ತುಕರಾಮ್, ಭೂ ಸೇನಾ ನಿಗಮದ ಅಧಿಕಾರಿ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡುವ ಭರವಸೆ ನೀಡಿದ ನಂತರ ಅಲ್ಲಿಂದ ಶವ ಸಾಗಿಸಲಾಯಿತು.
ಪುರಸಭೆ ಸದಸ್ಯ ಶರಣಕುಮಾರ ಸೊಲ್ಲಾಪುರ, ಭೀಮನಗೌಡ ಹಳ್ಳಿ, ನಿಂಗಾನಾಯ್ಕ ರಾಠೋಡ, ಪವಡೆಪ್ಪ ಮ್ಯಾಗೇರಿ, ಗುಡದಪ್ಪ ಬಿಳೆಭಾವಿ, ಪರಮಣ್ಣ ದೊಡ್ಡಮನಿ, ಮಹಿಬೂಬ ಸುರಪುರ, ಬುಚ್ಚಪ್ಪ ಗುರಿಕಾರ, ಮುದ್ದಣ್ಣ ಅಮ್ಮಾಪುರ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.
ಹುಣಸಗಿ ವೃತ್ತ ಸಿಪಿಐ ಎಸ್.ಎಂ.ಪಾಟೀಲ, ಕೊಡೇಕಲ್ ಪಿಎಸ್ಐ ಕಾಳಪ್ಪ ಬಡಿಗೇರ, ಹುಣಸಗಿ ಪಿಎಸ್ಐ ಮಹಾಂತೇಶ ಸಜ್ಜನ್ ಸೂಕ್ತ ಬಂದೋಬಸ್ತ್ ವಹಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.