ಶಹಾಪುರ: ಇಲ್ಲಿನ ಹಳೆ ಬಸ್ ನಿಲ್ದಾಣ ಹಾಗೂ ಬಸವೇಶ್ವರ ಬಡಾವಣೆಯ ನಡುವೆ ಇರುವ ಹಳ್ಳದಲ್ಲಿ ಜಾಲಿ ಗಿಡ ಬೆಳೆದು ನಿಂತಿದ್ದು, ಇದರಿಂದ ಮಳೆ ನೀರು ಸರಾಗವಾಗಿ ಸಾಗುತ್ತಿಲ್ಲ. ತುಸು ಹೆಚ್ಚು ಮಳೆಯಾದರೆ ಹಳ್ಳದ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗುವ ಭೀತಿ ಇದೆ ಎಂದು ಬಸವೇಶ್ವರ ಬಡಾವಣೆಯ ಮುಖಂಡ ಆರ್.ಎಂ.ಹೊನ್ನಾರಡ್ಡಿ ದೂರಿದ್ದಾರೆ.
‘ನಗರದ ಹೃದಯ ಭಾಗದಲ್ಲಿ ಹಳ್ಳದಲ್ಲಿ ನೀರು ಹರಿದು ಬರುತ್ತದೆ. ಈಗಾಗಲೇ ಹಳ್ಳದ ಅಕ್ಕಪಕ್ಕದ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು, ಹಳ್ಳಕ್ಕೆ ಹೊಂದಿಕೊಂಡಂತೆ ಕೆಲ ಪ್ರಭಾವಿ ವ್ಯಕ್ತಿಗಳು ವಾಣಿಜ್ಯ ಮಳಿಗೆಯನ್ನು ಕಟ್ಟಿದ್ದಾರೆ. ಅಲ್ಲದೆ ಹಳ್ಳಕ್ಕೆ ತಡೆಗೋಡೆ ನಿರ್ಮಿಸಿ ಆಸ್ಪತ್ರೆಯನ್ನು ನಿರ್ಮಿಸಲು ಕೆಲ ಪ್ರಭಾವಿ ವ್ಯಕ್ತಿಗಳು ಮುಂದಾಗಿದ್ದರು.
ಅಂದಿನ ಜಿಲ್ಲಾಧಿಕಾರಿ ಮನೋಜ್ ಕುಮಾರ್ ಜೈನ್ ದಿಟ್ಟಕ್ರಮ ತೆಗೆದುಕೊಂಡು ಹಳ್ಳ ಒತ್ತುವರಿ ತೆರವಿಗೆ ಸೂಚಿಸಿದ್ದರು’ ಎಂದು ಹಳ್ಳ ಉಳಿಸಿ ಹೋರಾಟ ನಡೆಸಿದ್ದ ಸಾಮಾಜಿಕ ಕಾರ್ಯಕರ್ತ ಮಲ್ಲಣ್ಣ ಶಿರಡ್ಡಿ ತಿಳಿಸಿದರು.
ಮಳೆಯ ಅಬ್ಬರ ಹೆಚ್ಚಾಗಿದೆ. ಮಳೆಯ ನೀರು ಹಾಗೂ ಕಾಲುವೆಯ ಹೆಚ್ಚುವರಿ ನೀರು ಹಳ್ಳವನ್ನು ಸೇರುತ್ತಿದೆ. ಹಳ್ಳದಲ್ಲಿ ಜಾಲಿಗಿಡ ಬೆಳೆದು ನಿಂತಿರುವುದರ ಜತೆಯಲ್ಲಿ ತ್ಯಾಜ್ಯ ವಸ್ತುಗಳನ್ನು ಎಸೆಯುತ್ತಾರೆ. ಇದರಿಂದ ಅಲ್ಲಿನ ಇಡೀ ಪ್ರದೇಶದ ದುರ್ವಾಸನೆಯಿಂದ ಕೂಡಿದೆ.
ಹಳ್ಳ ಉಳಿಸಿ ಅದರ ಎಡ ಮತ್ತು ಬಲ ಭಾಗದಲ್ಲಿ ಗಡಿ ಗುರುತು ಹಾಕಿ ಸಾರ್ವಜನಿಕ ಆಸ್ತಿಯನ್ನು ರಕ್ಷಿಸಬೇಕು. ಇಲ್ಲದೆ ಹೋದರೆ ನಗರಸಭೆಯ ಮುಂದೆ ಧರಣಿ ನಡೆಸಲಾಗುವುದು ಎಂದು ಮಲ್ಲಣ್ಣ ಶಿರಡ್ಡಿ ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.