ಯಾದಗಿರಿ: ₹ 1.95 ಕೋಟಿ ವೆಚ್ಚದಲ್ಲಿ ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಿಸಲಾಗುತ್ತಿರುವ ಈಜುಕೊಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ, ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳ ಆರೋಗ್ಯಕ್ಕೆ ಅನುಕೂಲವಾಗುವ ಮತ್ತು ದೈಹಿಕ, ಮಾನಸಿಕ ಸದೃಢತೆಗೆ ಹಾಗೂ ವಿವಿಧ ಅಂಗಾಂಗಗಳಿಗೆ ವ್ಯಾಯಾಮ ದೊರೆಯಲು ಈಜುಕೊಳ ಅವಶ್ಯಕವಾಗಿದೆ.
ಈ ಹಿನ್ನೆಲೆಯಲ್ಲಿ ಸುಸಜ್ಜಿತವಾದ ಈಜುಕೊಳ ನಿರ್ಮಾಣವಾಗಲಿದ್ದು, ಮಕ್ಕಳಿಗೆ, ಯುವಜನಾಂಗಕ್ಕೆ, ಸಾರ್ವಜನಿಕರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಒದಗಿಸಿರುವ ಅನುದಾ ನದಲ್ಲಿ ಈಜುಕೊಳ ನಿರ್ಮಾಣಗೊಳ್ಳ ಲಿದ್ದು, ರಾಜ್ಯಮಟ್ಟದ ಟೆಂಡರ್ ಮೂಲಕ ಬೆಂಗಳೂರಿನ ತೀರ್ಥ ಏಜೆನ್ಸಿಗೆ ಕಾಮಗಾರಿ ವಹಿಸಲಾಗಿದೆ. 8 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಇಲ್ಲಿ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಪ್ರತ್ಯೇಕವಾಗಿ ಈಜುಕೊಳಗಳು ನಿರ್ಮಾಣಗೊಳ್ಳಲಿವೆ ಎಂದು ಹೇಳಿದರು.
ಈ ಈಜುಕೊಳಗಳಿಗೆ ಬಟ್ಟೆ ಬದಲಾಯಿಸುವ ಕೊಠಡಿ, ವಿಶ್ರಾಂತಿ ಕೊಠಡಿಗಳು ಪ್ರತ್ಯೇಕವಾಗಿ ನಿರ್ಮಾಣ ಆಗಲಿವೆ. ಅದರಂತೆ ಕಾಂಪೌಂಡ್, ಸ್ನಾನಗೃಹ, ಶೌಚಾಲಯ, ಚಿಕ್ಕಮಕ್ಕಳ ಈಜುಕೊಳ ಸೇರಿದಂತೆ ಹಲವಾರು ವ್ಯವಸ್ಥೆಗಳನ್ನು ಒಳಗೊಂಡಿರುವ ಸುಸಜ್ಜಿತ ಈಜುಕೊಳ ಇಲ್ಲಿ ನಿರ್ಮಾಣವಾಗಲಿದೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಎ.ಬಿ. ಮಾಲಕರಡ್ಡಿ ಮಾತನಾಡಿ, ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿತ್ತು. ಇದೀಗ ಸರ್ಕಾರ ಅನುದಾನ ಒದಗಿಸಿದ್ದು, ಈಜುಕೊಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮನೋಜ್ ಜೈನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಕಾಸ ಕಿಶೋರ ಸುರಾಳಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಸವನಗೌಡ ಪಾಟೀಲ ಆಲ್ದಾಳ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.