ಯಾದಗಿರಿ: ಸುರಪುರ ತಾಲ್ಲೂಕಿನ ಮುಷ್ಠಳ್ಳಿ ಗ್ರಾಮದ ಅತ್ಯಾಚಾರ ಸಂತ್ರಸ್ಥೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
‘ಸುರಪುರ ತಾಲ್ಲೂಕಿನ ಮುಷ್ಠಳ್ಳಿ ಗ್ರಾಮದಲ್ಲಿ ಹೊಲೆಯ ಜನಾಂಗದವರ 20 ಮನೆಗಳು ಹಾಗೂ ಮಾದಿಗ ಜನಾಂಗದ 50 ಮನೆಗಳಿವೆ. ಈ ಗ್ರಾಮದಲ್ಲಿ ಮೇಲ್ವರ್ಗದ ಲಿಂಗಾಯತ ಮತ್ತು ಕಬ್ಬಲಿಗ ಜನಾಂಗದವರ ಪ್ರಭಾವ ಹೆಚ್ಚಿದೆ. ಮೇಲ್ವರ್ಗ ಜನಾಂಗದ ಗುಂಡಾಗಿರಿಯಿಂದ ಬೇಸತ್ತು ದಲಿತರು ಆತ್ಮಹತ್ಯೆ ಮಾಡಿಕೊಂಡರೂ ಇಲ್ಲಿಯವರೆಗೆ ಪೊಲೀಸ್ ಠಾಣೆಯಲ್ಲಿ ಒಂದೂ ಪ್ರಕರಣ ದಾಖಲಾಗಿಲ್ಲ’ ಎಂದು ಆರೋಪಿಸಿದರು.
‘ಗ್ರಾಮದಲ್ಲಿ ಪ್ರಥಮ ಬಾರಿಗೆ ಯುವತಿಯ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಈ ಘಟನೆಯಲ್ಲಿ ಗ್ರಾಮದ ಪ್ರಮುಖರು ಸೇರಿ ಆ ಯುವತಿಗೆ ಹಣ ಕೊಟ್ಟು ಪ್ರಕರಣ ಹಿಂಪಡೆಯುವಂತೆ ಒತ್ತಡ ಹಾಕಿದ್ದಾರೆ. ಬಡವರಾದ ಯುವತಿಯ ಕುಟುಂಬ ಪಟ್ಟಭದ್ರ ಒತ್ತಡಕ್ಕೆ ಮಣಿದಿದೆ’ ಎಂದು ದೂರಿದರು.
ಕರ್ನಾಟಕ ರಾಜ್ಯ ದಲಿತರ ಸಂಘರ್ಷ ಸಮಿತಿ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಜೆಟ್ಟಪ್ಪ ನಾಗರಾಳ, ಅಜೀಜ ಸಾಬ್ ಐಕೂರ್, ಬುದ್ದಿವಂತ ನಾಗರಾಳ, ಬಸವರಾಜ ಗೋನಾಳ, ಭೀಮಣ್ಣ ಕೊಂಗಂಡಿ, ಮಹೇಶ, ರಮೇಶ ಹುಂಡೇಕಲ್, ಯಲ್ಲಾಲಿಂಗ ಬೊಮ್ನಳ್ಳಿ, ದೇವಿಂದ್ರ ನಾಟೇಕರ್, ಗೌತಮ್ಮ ಕ್ರಾಂತಿ, ಹುಲುಗಪ್ಪ ಬೂಲಕುಂಟಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.