ADVERTISEMENT

ಎಲ್ಲ ಭಾಷೆಗಳ ತಾಯಿ ಸಂಸ್ಕೃತ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 7:13 IST
Last Updated 19 ಫೆಬ್ರುವರಿ 2018, 7:13 IST

ಕೆಂಭಾವಿ: ‘ಪ್ರಾಚೀನ ಕಾಲದ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಇಂದಿನ ಅಗತ್ಯ. ಈ ನಿಟ್ಟಿನಲ್ಲಿ ಯುವಕರು ಮುಂದೆ ಬರಬೇಕು’ ಎಂದು ಸಂಸ್ಕೃತ ಭಾರತಿ ಪ್ರತಿಷ್ಠಾನದ ರಾಜ್ಯ ಘಟಕದ ಅಧ್ಯಕ್ಷ ವಿ. ಜಿ. ಹೆಗಡೆ ಹೇಳಿದರು.

ಸಂಸ್ಕೃತ ಭಾರತಿ ಪ್ರತಿಷ್ಠಾನ ಹಾಗೂ ಜಯಸತ್ಯಪ್ರಮೋದ ಸೇವಾ ಸಂಘ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಜಿಲ್ಲಾ ಸಂಸ್ಕೃತ ಸಮ್ಮೇಳನದಲ್ಲಿ ಮಾತನಾಡಿದರು.

‘ವದತ ಸಂಸ್ಕೃತಮ್ ಜಯತ ಭಾರತಮ್' ಎಂಬ ನಾನ್ನುಡಿಯಂತೆ ಭಾರತೀಯ ಭಾಷೆಯಲ್ಲಿ ಪುರಾತನ ಭಾಷೆಯಾದ ಈ ಭಾಷೆಯು ಅತ್ಯಂತ ಸರಳ ಭಾಷೆಯಾಗಿದೆ. ವೇದ ಭಾಷೆ ಎಂದೆ ಪರಿಗಣಿಸಲ್ಪಟ್ಟ ಸಂಸ್ಕೃತ ಭಾಷೆಯು ಎಲ್ಲ ಭಾಷೆಗಳಿಗೆ ಮಾತೃ ಭಾಷೆಯಾಗಿದೆ’ ಎಂದು ಹೇಳಿದರು.

ADVERTISEMENT

‘ಭಾಷೆಯ ಮಹತ್ವವನ್ನು ಹಾಗೂ ಇದರ ಜ್ಞಾನವನ್ನು ಎಲ್ಲರಿಗೂ ತಿಳಿಸಲು ಈಗಾಗಲೆ ದೇಶದ ಹಲವು ಭಾಗಗಳಲ್ಲಿ ಅನೇಕ ಸಮ್ಮೇಳನಗಳು, ವಿಚಾರ ಗೋಷ್ಠಿಗಳು, ಚರ್ಚಾ ಸ್ಪರ್ಧೆಗಳು, ಪರೀಕ್ಷೆಗಳು ಸೇರಿದಂತೆ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿ ಪ್ರತಿಯೊಂದು ಜಿಲ್ಲಾ, ತಾಲ್ಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಸಂಸ್ಕೃತ ಸಮ್ಮೇಳನಗಳನ್ನು ನಡೆಸಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.

ಮಾಣಿಕಗಿರಿ ವಿವೇಕಾನಂದ ಆಶ್ರಮದ ಮುಖ್ಯಸ್ಥ ವೇಣುಗೋಪಾಲ ಮಾತನಾಡಿ, ಭಾಷೆಯ ಬೆಳವಣಿಗೆ, ಕಲಿಕೆ, ಮಹತ್ವ ಕುರಿತು ವಿವರಿಸಿದರು. ಸಂಸ್ಕೃತ ಭಾರತಿ ಪ್ರತಿಷ್ಠಾನದ ಜಿಲ್ಲಾ ಸಂಯೋಜಕ ತಿರುಮಲಾಚಾರ್ಯ ಜೋಷಿ ಪ್ರಾಸ್ತಾವಿಕ ಮಾತನಾಡಿದರು.

ಕೂಡಲಗಿ ಬಾಬಾ ಮಹಾರಾಜ ಮಠದ ಉಮಾಕಾಂತ ಸಿದ್ಧರಾಜ ಮಹಾರಾಜ ಹಾಗೂ ಕೆಂಭಾವಿ ಹಿರೇಮಠ ಸಂಸ್ಥಾನದ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಶಿಕ್ಷಕ ಪ್ರಹ್ಲಾದಾಚಾರ್ಯ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಘವೇಂದ್ರರಾವ ಮುಂಡರಗಿ ಉದ್ಘಾಟಿಸಿದರು.

ಜಯಸತ್ಯಪ್ರಮೋದ ಸೇವಾ ಸಂಘದ ಅಧ್ಯಕ್ಷ ವಾಮನರಾವ ದೇಶಪಾಂಡೆ, ಉಪಾಧ್ಯಕ್ಷ ಬಾಳಕೃಷ್ಣರಾವ ಕುಲಕರ್ಣಿ, ಪತ್ರಕರ್ತರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಸಂಜೀವರಾವ ಕುಲಕರ್ಣಿ ಇದ್ದರು.

ಶಹಪುರದ ಜ್ಞಾನ ಗಂಗೋತ್ರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ನಡೆಸಿಕೊಟ್ಟ ವೀರ ಅಭಿಮನ್ಯು ನಾಟಕ ಹಾಗೂ ಪುಷ್ಪಾ ಪುರೋಹಿತ, ವಾಣಿ ಕುಲಕರ್ಣಿ ಹೇಳಿದ ಸಂಸ್ಕೃತ ಸಂಭಾಷಣೆ ಎಲ್ಲರ ಮನ ಸೆಳೆಯಿತು. ರಾಘವೇಂದ್ರಾಚಾರ್ಯ ಮಸ್ಕಿ ನಿರೂಪಿಸಿದರು. ಪಂ. ಗಿರೀಶಾಚಾರ್ಯ ಕೊಪ್ಪರ ಸ್ವಾಗತಿಸಿದರು. ರಾಘವೇಂದ್ರಾಚಾರ್ಯ ಜೋಶಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.