ಕತುವಾ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದು ಮಾಡಿದ್ದು, ಜಮ್ಮು–ಕಾಶ್ಮೀರದಿಂದ ಭಯೋತ್ಪಾದನೆ ನಿರ್ಮೂಲನೆಯಾಗಲು ನೆರವಾಗಿದೆ ಎಂದು ಬುಧವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಪಾದಿಸಿದರು.
ಬಿಜೆಪಿ ಅಭ್ಯರ್ಥಿ ಮತ್ತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರನ್ನು ಬೆಂಬಲಿಸುವ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತಾನಾಡಿದ ಅವರು, 370ನೇ ವಿಧಿ ರದ್ದತಿಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಶ್ಲಾಘಿಸಿದರು. ಅಲ್ಲದೇ ದೇಶದ ಗಡಿಯಲ್ಲಿ ಭದ್ರವಾದ ಭದ್ರತಾ ವ್ಯವಸ್ಥೆ ಇರುವಂತೆ ಸೂಚಿಸಿದರು.
‘ಯಾವುದೇ ಪಾಕಿಸ್ತಾನಿ ಗಡಿಯಾಚೆಯಿಂದ ನುಸುಳಲು ಮತ್ತು ನಮ್ಮ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಲು ಧೈರ್ಯ ಮಾಡಬಹುದೇ? ಅವರಿಗೆ ಸಾಧ್ಯವಿಲ್ಲ. ಒಂದೇ ಒಂದು ಪಟಾಕಿ ಸಿಡಿದರೆ (ಗಡಿಯಲ್ಲಿ), ಪಾಕಿಸ್ತಾನವು ತಕ್ಷಣವೇ ಅದರಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ಅಂತಹ ಘಟನೆ ಸಂಭವಿಸಿದರೆ ಮುಂದೆ ಏನಾಗುತ್ತದೆ ಎಂಬುದು ಅವರಿಗೆ ತಿಳಿದಿದೆ’ ಎಂದು ಆದಿತ್ಯನಾಥ್ ಅವರು ಹೇಳಿದರು.
ಭಾರತವು ಅಭಿವೃದ್ಧಿ ಮತ್ತು ಪ್ರಗತಿ ಪಥದೆಡೆ ಸಾಗುತ್ತಿದೆ. 140 ಕೋಟಿ ಜನರಿರುವ ಭಾರತವು ತನ್ನದೇ ಆದ ಗೌರವ ಮತ್ತು ಘನತೆಯನ್ನು ಹೊಂದಿದೆ. ಪ್ರಪಂಚದ ಎಲ್ಲೆಡೆ ಭಾರತೀಯರು ಗೌರವ ಪಡೆಯುತ್ತಿದ್ದಾರೆ ಎಂದರು. ಅಲ್ಲದೇ ಜಮ್ಮು ಮತ್ತು ಕಾಶ್ಮೀರವು ಭಾರತದ ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರಿಕೊಂಡಿದೆ ಎಂದ ಅವರು ಕೇಂದ್ರಾಡಳಿತ ಪ್ರದೇಶದಲ್ಲಿ ಕೈಗೊಂಡಿರುವ ಹಲವು ಅಭಿವೃದ್ಧಿ ಯೋಜನೆಗಳನ್ನು ಉಲ್ಲೇಖಿಸಿದರು.
ದೇಶದ ಪ್ರತಿಯೊಬ್ಬರು ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಹೆಮ್ಮೆಯ ಕಿರೀಟವಾಗಿ ನೋಡಲು ಬಯಸುತ್ತಾರೆ ಎಂದು ಹೇಳಿದ ಅವರು, ಇಂದು ಭಾರತವು 80 ಕೋಟಿ ಜನರಿಗೆ ಉಚಿತ ಪಡಿತರವನ್ನು ನೀಡುತ್ತಿದೆ, 1947ರಲ್ಲಿ ಭಾರತದಿಂದ ಪ್ರತ್ಯೇಕವಾದ ಪಾಕಿಸ್ತಾನದಲ್ಲಿ ಇಂದಿಗೂ ಭಿಕ್ಷಾಪಾತ್ರೆಯೊಂದಿಗೆ ತಿರುಗಾಡುತ್ತಿದ್ದಾರೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.