ADVERTISEMENT

ಮಾಜಿ ಶಾಸಕರ ಮನೆ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2014, 20:33 IST
Last Updated 15 ಏಪ್ರಿಲ್ 2014, 20:33 IST

ಚನ್ನಪಟ್ಟಣ: ಕ್ಷೇತ್ರದ ಮಾಜಿ ಶಾಸಕ ಎಂ.ಸಿ.ಅಶ್ವತ್ಥ್‌ ಅವರ ಪಟ್ಟಣದ ಕುವೆಂಪುನಗರ ಆರನೆ ಅಡ್ಡರಸ್ತೆಯ ನಿವಾಸದ ಮೇಲೆ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆಯಿತು.

ಅಶ್ವತ್ಥ್‌ ಮನೆಯಲ್ಲಿ ಮತದಾರರಿಗೆ ಹಂಚಲು ಹಣ ಸಂಗ್ರಹಿಸಿ ಇಡಲಾಗಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿದ್ದಾಗಿ ದಾಳಿಯ ನೇತೃತ್ವ ವಹಿಸಿದ್ದ ನಗರಸಭಾ ಆಯುಕ್ತ ಜಗದೀಶ್‌ ಹಾಗೂ ಪುರ ಠಾಣೆ ಎಸ್‌.ಐ ವಿಜಯ್‌ಕುಮಾರ್‌ ತಿಳಿಸಿದರು.

ದಾಳಿ ಸಂದರ್ಭದಲ್ಲಿ ಅಶ್ವತ್ಥ್‌ ಮನೆಯಲ್ಲಿ ಯಾವುದೇ ಹಣ ದೊರೆತಿಲ್ಲ. ಮನೆಯ ಸಂಪೂರ್ಣ ಭಾಗವನ್ನು ವೀಡಿಯೋ ಚಿತ್ರೀಕರಣ ಮಾಡಿದ್ದು, ಇದನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು. ಸ್ಥಳದಲ್ಲೆ ಇದ್ದ ಅಶ್ವತ್ಥ್‌ ಇದಕ್ಕೆ ಪ್ರತಿಕ್ರಿಯಿಸಿ ಇದು ದುರುದ್ದೇಶಪೂರ್ವಕ ಕೆಲಸ. ಕಾಂಗ್ರೆಸ್‌ನವರು ಬಹಿರಂಗವಾಗೆ ಹಣ ಹಂಚುತ್ತಿದ್ದರೂ ಅದನ್ನು ಪ್ರಶ್ನಿಸದ ಅಧಿಕಾರಿಗಳು ಬೇಕೆಂದೇ ನಮ್ಮ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.