ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ‘ದಿಢೀರ್’ ಬೆಳವಣಿಗೆಯಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಬದಲಾವಣೆ ಮಾಡಿದೆ. ತನ್ನ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿ ಎಂದು ಘೋಷಿಸಿದ್ದ ಶಾಸಕ ಎಂ.ರಾಜಣ್ಣ ಅವರ ಬದಲಾಯಿಸಿ, ಸೋಮವಾರ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ಅವರನ್ನು ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.
ಟಿಕೆಟ್ಗಾಗಿ ರಾಜಣ್ಣ, ರವಿಕುಮಾರ್ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಆದರೆ ವರಿಷ್ಠರು ಈ ಬಾರಿಯೂ ರಾಜಣ್ಣ ಅವರೇ ಅಭ್ಯರ್ಥಿ ಎಂದು ವಿಕಾಸಪರ್ವ ಸಮಾವೇಶದಲ್ಲಿ ಘೋಷಣೆ ಮಾಡಿದ್ದರು. ಇದರಿಂದ ಮುನಿಸಿಕೊಂಡಿದ್ದ ರವಿಕುಮಾರ್ ಅವರು ‘ಬಂಡಾಯ’ದ ಬಾವುಟ ಹಾರಿಸುವ ಸುಳಿವು ನೀಡಿ ತಮ್ಮದೇ ಬೆಂಬಲಿಗರ ಪಡೆ ಕಟ್ಟಿಕೊಂಡು ಪ್ರಚಾರಕ್ಕೆ ಇಳಿದಿದ್ದರು.
ಸೋಮವಾರ ಬೆಳಿಗ್ಗೆ ರಾಜಣ್ಣ ಅವರು ತಮ್ಮ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಆ ವೇಳೆಗಾಗಲೇ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಬದಲಾಗಿದ್ದಾರೆ ಎಂಬ ಸುದ್ದಿ ಹರಡಿತ್ತು. ಈ ಕುರಿತು ರಾಜಣ್ಣ ಅವರನ್ನು ಕೇಳಿದರೆ, ‘ನಾನೇ ಪಕ್ಷದ ಅಧಿಕೃತ ಅಭ್ಯರ್ಥಿ. ಇಂತಹ ಸುಳ್ಳು ವದಂತಿಗಳಿಗೆ ಜನರು ಕಿವಿಗೊಡಬಾರದು’ ಎಂದು ಹೇಳಿದ್ದರು.
ಮಧ್ಯಾಹ್ನ 1ರ ಸುಮಾರಿಗೆ ಬೆಂಗಳೂರಿನಿಂದ ಬಂದ ರವಿಕುಮಾರ್ ಅವರು ಪಕ್ಷದ ವರಿಷ್ಠರು ತಮ್ಮ ಹಿಂದಿನ ನಿರ್ಧಾರ ಬದಲಿಸಿ ನನ್ನನ್ನು ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿ ‘ಬಿ’ ಫಾರಂ ನೀಡಿದ್ದಾರೆ ಎಂದು ಪ್ರದರ್ಶಿಸಿದರು.
ಜತೆಗೆ, ರವಿಕುಮಾರ್ ಅವರನ್ನೇ ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ಪರಿಗಣಿಸುವಂತೆ ಚುನಾವಣಾಧಿಕಾರಿಗೆ ದೇವೇಗೌಡರು ಬರೆದ ಪತ್ರವನ್ನು ಮಾಧ್ಯಮಗಳಿಗೆ ನೀಡಿದರು. ನಂತರ ನಾಮಪತ್ರ ಸಲ್ಲಿಸಿದರು.
ಈ ಕುರಿತು ಪ್ರತಿಕ್ರಿಯೆ ಪಡೆಯಲು ರಾಜಣ್ಣ ಅವರನ್ನು ಸಂಪರ್ಕಿಸಲಾಯಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.
ಚುನಾವಣಾಧಿಕಾರಿಗೆ ಎಚ್.ಡಿ.ದೇವೇಗೌಡರು ಬರೆದ ಪತ್ರ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.