ಮಕ್ಕಳನ್ನೇ ಕೇಂದ್ರೀಕರಿಸಿ ಸಿನಿಮಾ ಮಾಡುವುದೇ ವಿರಳವಾಗಿದ್ದು, ಅಲ್ಲೊಂದು ಇಲ್ಲೊಂದು ಎಂಬಂತೆ ಮಕ್ಕಳ ಸಿನಿಮಾಗಳೂ ಬರುತ್ತಿವೆ. ಆದರೆ ಅಂಥ ಸಿನಿಮಾಗಳು ಹೆಚ್ಚು ಜನರಿಗೆ ತಲುಪುತ್ತಿಲ್ಲ. ಅವು ಬರೀ ಸಬ್ಸಿಡಿ, ಪ್ರಶಸ್ತಿಗಳನ್ನೇ ನೆಚ್ಚಿಕೊಂಡು ಮಾಡಿದ ಸಿನಿಮಾ ಎಂಬ ಹಣೆಪಟ್ಟಿಯೂ ಒದಗಿಬರುತ್ತದೆ. ಇಂಥ ಎಲ್ಲ ಆರೋಪಗಳನ್ನು ಕಳಚಿಕೊಳ್ಳುವ ಉತ್ಸಾಹದಲ್ಲಿದೆ ‘ಎಳೆಯರು ನಾವು ಗೆಳೆಯರು’ ಬಳಗ.
‘ಇದು ಮಕ್ಕಳ ಚಿತ್ರವಾದರೂ ಅಪ್ಪಟ ಕಮರ್ಷಿಯಲ್ ಸಿನಿಮಾ. ಪ್ರಶಸ್ತಿಯ ಹಂಬಲ ಈ ಚಿತ್ರದ ಹಿಂದಿಲ್ಲ. ಯಾವುದಕ್ಕೂ ರಾಜಿ ಮಾಡಿಕೊಳ್ಳದೆ ಅದ್ದೂರಿಯಾಗಿ ಸಿನಿಮಾ ಮಾಡಿದ್ದೇವೆ. ಒಳ್ಳೆಯ ತಂತ್ರಜ್ಞರೇ ಕೆಲಸ ಮಾಡಿದ್ದಾರೆ’ ಎಂದರು ಮೊದಲ ಬಾರಿ ನಿರ್ಮಾಣಕ್ಕೆ ಇಳಿದಿರುವ ನಾಗರಾಜ್ ಗೋಪಾಲ್. ಮಕ್ಕಳ ಮೇಲಿನ ಕಾಳಜಿಯಿಂದಾಗಿ ಈ ಸಿನಿಮಾ ಮಾಡಿದ್ದಾಗಿ ಅವರು ಹೇಳಿಕೊಂಡರು.
‘ಡ್ರಾಮಾ ಜೂನಿಯರ್ಸ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನಮನ್ನಣೆ ಗಳಿಸಿದ ಪುಟಾಣಿಗಳು ನಟಿಸಿರುವುದು ಈ ಸಿನಿಮಾದ ವಿಶೇಷ ಆಕರ್ಷಣೆ. ಅಚಿಂತ್ಯ, ನಿಹಾಲ್, ಅಭಿಷೇಕ್, ಅಮೋಘ್, ಪುಟ್ಟರಾಜು, ತುಷಾರ್, ಮಹತಿ, ತೇಜಸ್ವಿನಿ, ಮಹೇಂದ್ರ, ಸೂರಜ್ ಸಿನಿಮಾದ ಮುಖ್ಯ ಪಾತ್ರಧಾರಿಗಳು. ಅವರೇ ತಮ್ಮ ತಮ್ಮ ಪಾತ್ರಕ್ಕೆ ಕಂಠದಾನವನ್ನೂ ಮಾಡಿದ್ದಾರೆ.
ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ವಿಕ್ರಂ ಸೂರಿ ಅವರಿಗೆ ಇದು ನಿರ್ದೇಶನದ ಮೊದಲ ಅನುಭವ. ತನ್ನ ಮೊದಲ ಸಿನಿಮಾವನ್ನು ಪ್ರೇಕ್ಷಕ ಹೇಗೆ ಬರಮಾಡಿಕೊಳ್ಳುತ್ತಾನೆ ಎಂಬ ಕುತೂಹಲದ ಜೊತೆಗೆ ಆತಂಕವೂ ಅವರಲ್ಲಿದೆ. ರಿಚರ್ಡ್ ಲೂಯಿಸ್ ಚಿತ್ರಕಥೆ ಬರೆದಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ಎಂ.ಎನ್. ವ್ಯಾಸರಾವ್, ಬಿ.ಆರ್. ಲಕ್ಷ್ಮಣರಾವ್ ಅವರ ಗೀತೆಗಳನ್ನು ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ. ಸುದ್ದಿಗೋಷ್ಠಿಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಯಿತು. ಜೂನ್ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.