ಏಪ್ರಿಲ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ನಡೆದ ‘ಕನ್ನಡ ಚಲನಚಿತ್ರ ಕಪ್’ ಕ್ರಿಕೆಟ್ ಟೂರ್ನಿಯ ಪಂದ್ಯಗಳು ಕಿರುತೆರೆ ವೀಕ್ಷಕರ ಎದುರು ಮತ್ತೆ ತೆರೆದುಕೊಳ್ಳಲಿವೆ. ಜೀ ಕನ್ನಡ ವಾಹಿನಿಯಲ್ಲಿ ಇದು ಪ್ರಸಾರ ಆಗಲಿದೆ. ಇದು ‘ಚಂದನವನ’ದ ತಾರೆಯರು ಪಾಲ್ಗೊಂಡಿದ್ದ ಕ್ರಿಕೆಟ್ ಟೂರ್ನಿ. ಇದು ಶನಿವಾರ ಮತ್ತು ಭಾನುವಾರ (ಮೇ 12 ಮತ್ತು 13) ಹಾಗೂ ಮೇ 19 ಮತ್ತು 20ರಂದು ಸಂಜೆ 5ರಿಂದ 7.30ರವರೆಗೆ ಪ್ರಸಾರ ಆಗಲಿವೆ.
ಕಿಚ್ಚ ಸುದೀಪ್ ಮುಂದಾಳತ್ವದಲ್ಲಿ ಈ ಟೂರ್ನಿ ನಡೆದಿತ್ತು. ಒಟ್ಟು ಆರು ತಂಡಗಳು ಇದರಲ್ಲಿ ಪಾಲ್ಗೊಂಡಿದ್ದವು. ಆರೂ ತಂಡಗಳನ್ನು ಮುನ್ನಡೆಸಿದವರು ಕನ್ನಡ ಚಿತ್ರರಂಗದ ತಾರಾ ನಟರು. ವಿಜಯನಗರ ಪೇಟ್ರಿಯಾಟ್ಸ್, ಹೊಯ್ಸಳ ಈಗಲ್ಸ್, ಒಡೆಯರ್ ಚಾರ್ಜರ್ಸ್, ಕದಂಬ ಲಯನ್ಸ್, ಗಂಗಾ ವಾರಿಯರ್ಸ್ ಹಾಗೂ ರಾಷ್ಟ್ರಕೂಟ ಪ್ಯಾಂಥರ್ಸ್ ಎಂಬುದು ತಂಡಗಳ ಹೆಸರು.
ಆರು ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿತ್ತು. ‘ಎ’ ಗುಂಪಿನಲ್ಲಿ ಗಂಗಾ ವಾರಿಯರ್ಸ್, ಕದಂಬ ಲಯನ್ಸ್ ಮತ್ತು ಒಡೆಯರ್ ಚಾರ್ಜರ್ಸ್ ತಂಡಗಳು ಇದ್ದವು. ‘ಬಿ’ ಗುಂಪಿನಲ್ಲಿ ಹೊಯ್ಸಳ ಈಗಲ್ಸ್, ವಿಜಯನಗರ ಪೇಟ್ರಿಯಾಟ್ಸ್ ಮತ್ತು ರಾಷ್ಟ್ರಕೂಟ ಪ್ಯಾಂಥರ್ಸ್ ತಂಡಗಳು ಇದ್ದವು. ಮೇ 20ರಂದು, ಅಂದರೆ ಕ್ರಿಕೆಟ್ ಟೂರ್ನಿ ಪ್ರಸಾರವಾಗುವ ಕೊನೆಯ ದಿನ, ಜೀ ಕನ್ನಡ ವಾಹಿನಿಯಲ್ಲಿ ಮ್ಯೂಸಿಕಲ್ ಡಾನ್ಸ್ ನೈಟ್ ಕೂಡ ಪ್ರಸಾರವಾಗಲಿದೆಯಂತೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.