ಕೆಲವು ತಿಂಗಳುಗಳ ಹಿಂದೆ ಎಸ್. ನಾರಾಯಣ್ ನಿರ್ದೇಶನದ ಪಂಟ ಸಿನಿಮಾ ಬಿಡುಗಡೆಯ ದಿನಾಂಕವನ್ನು ಘೋಷಿಸಿತ್ತು. ಇನ್ನು ಮೂರು ದಿನ ಇವೆ ಎನ್ನುವಾಗ ಬಿಡುಗಡೆಯನ್ನು ಮುಂದೂಡಿತ್ತು. ಇದೀಗ ಮತ್ತೊಂದು ದಿನಾಂಕವನ್ನು ನಿಗದಿಪಡಿಸಿಕೊಂಡು ಪತ್ರಕರ್ತರ ಮುಂದೆ ತಂಡ ಹಾಜರಾಗಿತ್ತು. ‘ಜೂನ್ 23 ಸಿನಿಮಾ ಬಿಡುಗಡೆ ಮಾಡಿಯೇ ಮಾಡುತ್ತೇವೆ’ ಎಂದರು ನಿರ್ದೇಶಕ ಎಸ್. ನಾರಾಯಣ್.
ಹೀಗೆ ಹೇಳುವುದಕ್ಕೂ ಮುನ್ನ ಅವರು ಹಿಂದೆ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದಕ್ಕೂ ಕಾರಣವನ್ನು ವಿವರಿಸಿದರು.
ಈ ಎಲ್ಲ ಅಲ್ಲೋಲಕ್ಕೆ ಕಾರಣವಾಗಿದ್ದು ಒಂದು ಹಾಡು. ‘ಪಂಟ’ ಸಿನಿಮಾ ಮಾಡುವಾಗಲೇ ‘ಕುಲುಕು ಕುಲುಕು’ ಎಂಬ ಒಂದು ಹಾಡನ್ನು ಸಿದ್ಧಪಡಿಸಿಕೊಂಡಾಗಿತ್ತು. ಆದರೆ ಅದು ಕಥೆಗೆ ಹೊಂದಿಕೊಳ್ಳುವುದಿಲ್ಲ ಎಂದು ಆ ಹಾಡನ್ನು ನಿರ್ದೇಶಕರು ಕೈಬಿಟ್ಟರು.
ಬಿಡುಗಡೆಗೆ ಮೂರು ದಿನ ಮೊದಲು ನಿರ್ಮಾಪಕರಿಗೆ ಈ ಹಾಡು ಸಿನಿಮಾದಲ್ಲಿ ಇರಲೇಬೇಕು ಅನಿಸಿತು. ಆ ಒತ್ತಡಕ್ಕೆ ಮಣಿದು ಆ ಹಾಡನ್ನು ಚಿತ್ರೀಕರಿಸಿಕೊಂಡು ಸಿನಿಮಾಕ್ಕೆ ಅಳವಡಿಸಿ ಮತ್ತೆ ಬಿಡುಗಡೆಗೆ ಸಿದ್ಧಗೊಂಡಿದೆ.
ಆ ಒಂದು ‘ವಿಶೇಷ’ ಹಾಡಿಗಾಗಿ ಮುಂಬೈನಿಂದ ತಾರಾ ಶುಕ್ಲ ಎಂಬ ಬೆಡಗಿಯನ್ನೂ ಕರೆತರಲಾಗಿದೆ. ದಾಬಾ ಒಂದರಲ್ಲಿ ನಡೆಯುವ ಈ ಹಾಡಿನಲ್ಲಿ ಗಡ್ಡಪ್ಪ ಮತ್ತು ಸೆಂಚುರಿ ಗೌಡರನ್ನು ಕುಣಿಸಲಾಗಿದೆ. ‘ಆದರೆ ಇದು ಕ್ಯಾಬರೆ ಡಾನ್ಸ್ ಆಗಲಿ ಐಟಂ ಡಾನ್ಸ್ ಆಗಲಿ ಅಲ್ಲವೇ ಅಲ್ಲ’ ಎಂಬ ಸಮರ್ಥನೆ ನಿರ್ದೇಶಕರದು.
ಆದರೆ ‘ತಮ್ಮ ಅಭಿರುಚಿಗೆ ಹೊಂದಿಕೊಳ್ಳುವ ನೃತ್ಯವೂ ಅಲ್ಲ. ಎಲ್ಲರ ಒತ್ತಡಕ್ಕೆ ಮಣಿದು ರಾಜಿಯಾಗಿದ್ದೇನೆ’ ಎಂಬ ಸಂಗತಿಯನ್ನೂ ಅವರು ಜಾಹೀರು ಮಾಡಿದರು.
ನಟನಾ ತರಬೇತಿ ಪಡೆದುಕೊಳ್ಳಲು ಅಮೆರಿಕಕ್ಕೆ ಹೋಗಿದ್ದ ನಟ ಅನೂಪ್ ಈ ಹಾಡಿಗಾಗಿಯೇ ಭಾರತಕ್ಕೆ ಬಂದಿದ್ದಾರೆ. ‘ಇದು ದರೋಡೆ ಕಥೆಯನ್ನಿಟ್ಟುಕೊಂಡು ವಿಭಿನ್ನ ಧಾಟಿಯಲ್ಲಿ ನಿರೂಪಣೆ ಮಾಡಿರುವ ಸಿನಿಮಾ. ನಾನು ಬುದ್ಧಿವಂತ ಕಳ್ಳನ ಪಾತ್ರದಲ್ಲಿ ನಟಿಸಿದ್ದೇನೆ’ ಎಂದರು.
ಎಸ್. ನಾರಾಯಣ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.